ಬದಿಯಡ್ಕ: ವಿದ್ಯಾರ್ಥಿಗಳಲ್ಲಿ ಕೃಷಿ ಆಸಕ್ತಿ ಮತ್ತು ನವೀನ ತಂತ್ರಜ್ಞಾನಗಳನ್ನು ಬಳಸಿ ಕೃಷಿ ವ್ಯವಸ್ಥೆಗಳನ್ನು ಹೆಚ್ಚು ಸುಲಭಗೊಳಿಸುವ ನಿಟ್ಟಿನಲ್ಲಿ ಪರಿಚಯಾತ್ಮಕ ಮಾಹಿತಿ ಸಂಗ್ರಹದ ಕ್ರಿಯಾತ್ಮಕ ಚಟುವಟಿಕೆಗಳು ಅಗತ್ಯ ಎನ್ನುವುದನ್ನು ಗಮನದಲ್ಲಿಸಿ ಶಾಲೆಗಳಲ್ಲಿ ಕೃಷಿ ಸಂದರ್ಶನ ಚಟುವಟಿಕೆ ಹಮ್ಮಿಕೊಳ್ಳಲಾಗಿತ್ತು.
ಈ ನಿಟ್ಟಿನಲ್ಲಿ ನೀರ್ಚಾಲಿನ ಮಹಾಜನ ಸಂಸ್ಕೃತ ಕಾಲೇಜಿನ ಹೈಯರ್ ಸೆಕೆಂಡರಿ ಶಾಲೆಯ ಏಳನೇ ತರಗತಿಯ ವಿದ್ಯಾರ್ಥಿಗಳು ಬುಧವಾರ ಕಾಸರಗೋಡಿನ ಸಿಪಿಸಿಆರ್ಐ ಸಂಸ್ಥೆಯನ್ನು ಸಂದರ್ಶಿಸಿದರು.
ಸಿಪಿಸಿಆರ್ಐ ಸಂಸ್ಥೆಯ ಹಿರಿಯ ತಾಂತ್ರಿಕ ಅಧಿಕಾರಿ ಮುರಳೀಕೃಷ್ಣ ಕಿಳಿಂಗಾರು ವಿದ್ಯಾರ್ಥಿಗಳಿಗೆ ಟಿಶ್ಯೂ ಕಲ್ಚರ್ ಕುರಿತು ಮತ್ತು ಕೃಷಿ ವಿಜ್ಞಾನ ಕೇಂದ್ರದ ಅಧಿಕಾರಿ ಮಣಿಕಂಠನ್ ಕಸಿ ಕಟ್ಟುವ ಬಗ್ಗೆ ಪ್ರಾತ್ಯಕ್ಷಿಕೆ ನೀಡಿದರು. ಅಂಗಾಂಶ ಕೃಷಿ (ಟಿಶ್ಯೂ ಕಲ್ಚರ್) ಮತ್ತು ಕಸಿಕಟ್ಟುವಿಕೆಯ ಸೂಕ್ಷ್ಮಗಳನ್ನು ಅರ್ಥ ಮಾಡಿಸುವಲ್ಲಿ ವಿದ್ಯಾರ್ಥಿಗಳು ಅಧಿಕಾರಿಗಳಲ್ಲಿ ಪ್ರಶ್ನೆಗಳನ್ನು ಕೇಳಿ ತಮ್ಮ ಅರಿವಿನ ವಿಸ್ತಾರವನ್ನು ಹೆಚ್ಚಿಸಿಕೊಂಡರು.
ಶಿಕ್ಷಕರಾದ ಕೆ. ಗೋವಿಂದ ಶರ್ಮ, ಜ್ಯೋತಿಲಕ್ಷ್ಮಿ ಎಸ್, ಅವಿನಾಶ ಕಾರಂತ ಎಂ., ಶೋಭಾ ಕೆ ಹಿರೇಮಠ್ ನೇತೃತ್ವ ನೀಡಿದ್ದರು.