ಮಂಗಳೂರು: ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ‘ತೌಕ್ತೆ’ ಚಂಡಮಾರುತ ಏಳುವ ಸಾಧ್ಯತೆಗಳಿವೆ. ಹೀಗಾಗಿ, ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಲಾಗಿದೆ.
ಮೇ 16ರ ಸುಮಾರಿಗೆ ಪೂರ್ವ ಮಧ್ಯ ಅರಬ್ಬಿ ಸಮುದ್ರದಲ್ಲಿ ಬಿರುಗಾಳಿ ತೀವ್ರವಾಗಲಿದೆ. ಈ ಹಿನ್ನೆಲೆಯಲ್ಲಿ ಮೀನುಗಾರಿಕೆ ದೋಣಿಗಳು, ಮೀನುಗಾರಿಕೆಗೆ ಇಳಿಯಬಾರದು. ಈಗಾಗಲೇ ಮೀನುಗಾರಿಕೆಗೆ ತೆರಳಿರುವ ದೋಣಿಗಳು ದಡಕ್ಕೆ ಸೇರುವಂತೆ ಕರಾವಳಿ ಕಾವಲು ಪಡೆ ಸೂಚಿಸಿದೆ.
ಗಸ್ತು ತಿರುಗುತ್ತಿರುವ ಕರಾವಳಿ ಕಾವಲು ಪಡೆಯ ಹಡಗುಗಳು ಹಾಗೂ ವಿಮಾನಗಳ ಮೂಲಕ ಸಮುದ್ರದಲ್ಲಿರುವ ಮೀನುಗಾರರಿಗೆ ಹವಾಮಾನ ಎಚ್ಚರಿಕೆ ನೀಡಿ ಹತ್ತಿರದ ತೀರಕ್ಕೆ ಮರಳಲು ತಿಳಿಸಲಾಗುತ್ತಿದೆ ಎಂದು ಕರಾವಳಿ ಕಾವಲು ಪಡೆ ಕಮಾಂಡರ್ ವೆಂಕಟೇಶ್ ತಿಳಿಸಿದ್ದಾರೆ.
ತೌಕ್ತೆ ಚಂಡಮಾರುತದಿಂದ ಕರ್ನಾಟಕದ ಕರಾವಳಿ, ಕೇರಳ, ತಮಿಳುನಾಡು, ಲಕ್ಷದ್ವೀಪಗಳಲ್ಲಿ ಮೇ 16ರ ವರೆಗೆ ಹಗುರದಿಂದ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.