ಬೆಂಗಳೂರು: ರಾಜ್ಯದ ದಕ್ಷಿಣ ಒಳನಾಡು, ಉತ್ತರ ಒಳನಾಡು ಮತ್ತು ಕರಾವಳಿಯ ಕೆಲವೆಡೆ ಮಂಗಳವಾರ ಬಿರುಸಿನ ಮಳೆಯಾಗಿದೆ.
ಉಡುಪಿ ಜಿಲ್ಲೆಯ ಬ್ರಹ್ಮಾವರದ ಹನೇಹಳ್ಳಿ, ಕುಂದಾಪುರ ತಾಲ್ಲೂಕಿನ ಉಪ್ಪಿನಕುದ್ರು, ಕುಂಭಾಶಿ, ಗುಲ್ವಾಡಿಯಲ್ಲಿ ಭಾಗಶಃ ಮನೆಗಳು ಕುಸಿದಿವೆ. ಮಂಗಳೂರು ನಗರದಲ್ಲಿ ಎರಡು ಗಂಟೆಗಳ ಕಾಲಾ ಧಾರಾಕಾರ ಮಳೆ ಸುರಿದಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಕೋಟೆಕಾರ್ನಲ್ಲಿ 9.1, ಹರೇಕಳ 8.3, ಕಿನ್ಯಾ 7.1, ಪಜಿರು 6.8, ಬಡಗಬೆಳ್ಳೂರಲ್ಲಿ 6.4 ಸೆಂ.ಮೀಟರ್ ಮಳೆಯಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಕಾರವಾರ, ಭಟ್ಕಳದಲ್ಲಿ ಹಲವು ತಾಸುಗಳವರೆಗೆ ನಿರಂತರ ಮಳೆ ಸುರಿದಿದೆ. ಕುಮಟಾ, ಅಂಕೋಲಾ, ಹೊನ್ನಾವರ ಭಾಗದಲ್ಲಿ ಸಾಧಾರಣ ಮಳೆ ಆಗಿದೆ. ಮಡಿಕೇರಿ ನಗರದಲ್ಲಿ ಸಂಜೆಯ ನಂತರ ಧಾರಾಕಾರ ಮಳೆಯಾಗಿದೆ.
ಬೀದರ್ ಜಿಲ್ಲೆಯ ಬಸವಕಲ್ಯಾಣ, ಹುಲಸೂರ, ಭಾಲ್ಕಿ ಹಾಗೂ ಔರಾದ್ ತಾಲ್ಲೂಕುಗಳಲ್ಲಿ ಗುಡುಗು ಸಹಿತ ಮಳೆಯಾಗಿದೆ.