ಮಂಗಳೂರು: 12ನೇ ಶತಮಾನದಲ್ಲಿದ್ದ ಕ್ರಾಂತಿಕಾರಿ ಶರಣರು ಸಮಾಜವನ್ನು ಜಾತಿ ಮತ ಭೇದ ಇಲ್ಲದೆ ಒಂದುಗೂಡಿಸುವ ಕೆಲಸ ಮಾಡಿದ್ದಾರೆ. ಅವರ ತತ್ವಗಳನ್ನು ಯುವಪೀಳಿಗೆಗೆ ತಿಳಿಸಲು ಅಣಿಯಾಗಿರುವ ಕದಳಿ ಮಹಿಳಾ ವೇದಿಯ ಸದಸ್ಯರಿಂದ ಸಮಾಜಮುಖಿ ಕಾರ್ಯಗಳು ನಡೆಯಲಿ ಎಂದು ವಕೀಲ ಸದಾಶಿವ ಉಳ್ಳಾಲ್ ಹೇಳಿದರು.
ನಗರದ ಕೊಡಿಯಾಲ್ ಬೈಲಿನಲ್ಲಿರುವ ವಾತ್ಸಲ್ಯಧಾಮದಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಕದಳಿ ಮಹಿಳಾ ವೇದಿಕೆಯ ‘ಸೇವಾದೀಕ್ಷೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಾರ್ಯಕ್ರಮ ಉದ್ಘಾಟಿಸಿದ ದಕ್ಷಿಣ ಕನ್ನಡ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಜಗನ್ನಾಥಪ್ಪ ಪನಸಾಲೆ, ಜಿಲ್ಲಾ ಮಟ್ಟದಲ್ಲಿ ಆರಂಭಗೊಂಡ ಕದಳಿ ಮಹಿಳಾ ವೇದಿಕೆಯು ಎಲ್ಲಾ ತಾಲ್ಲೂಕುಗಳಿಗೆ ಪಸರಿಸಿ ಶರಣರ ತತ್ವಗಳ ಪ್ರಚಾರದ ಮೂಲಕ ಸಮಾಜವನ್ನು ಒಗ್ಗೂಡಿಸುವ ಕೆಲಸ ಮಾಡಲಿ ಎಂದರು.
ವಾತ್ಸಲ್ಯಧಾಮದ ಸಂಚಾಲಕ ಶ್ರೀನಾಥ ಹೆಗ್ಡೆ ಮಾತನಾಡಿ, ಸಮಾಜದ ಏಳ್ಗೆಗೆ ಮಹಿಳೆಯರ ಪಾತ್ರ ಹಿರಿದು. ವಚನಗಳು ಸರಳವಾಗಿದ್ದು ಜನಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿವೆ. ಈ ಸಂಘಟನೆಯಿಂದ ವಚನ– ತತ್ವಗಳು ಮನೆ ಮನ ತಲುಪಲಿ ಎಂದರು.
ದಕ್ಷಿಣ ಕನ್ನಡ ಜಿಲ್ಲಾ ಕದಳಿ ಮಹಿಳಾ ವೇದಿಕೆಯ ಅಧ್ಯಕ್ಷರಾಗಿ ಸುರೇಖಾ ಯಳವಾರ, ಉಪಾಧ್ಯಕ್ಷೆಯಾಗಿ ನಿರ್ಮಲ ಚಂದ್ರಶೇಖರ್, ಖಜಾಂಚಿಯಾಗಿ ಶಕುಂತಲ ಹಾಗೂ ಕಾರ್ಯದರ್ಶಿಯಾಗಿ ಶ್ರೀಮತಿ ಮಣಿಶಂಕರ್ ಆಯ್ಕೆಗೊಂಡರು.