ಉಜಿರೆ: ‘ವ್ಯವಹಾರದಲ್ಲಿ ನಾನು ಯಾರಿಗೂ ಹಣ ಕೊಡುವುದಕ್ಕೆ ಇಲ್ಲ’ ಎಂದು ಅಪಹರಣಕ್ಕೆ ಒಳಗಾಗಿದ್ದ ಬಾಲಕ ಅನುಭವ್ನ ತಂದೆ ಬಿಜೋಯ್ ಸ್ಪಷ್ಟಪಡಿಸಿದರು.
ಉಜಿರೆಯಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಾನು ಕೋಟ್ಯಂತರ ರೂಪಾಯಿ ಪಾವತಿಸಲಿಕ್ಕಿದೆ ಎಂದು ಮಾಧ್ಯಮಗಳಲ್ಲಿ ತಪ್ಪು ಮಾಹಿತಿ ಪ್ರಕಟವಾಗುತ್ತಿದೆ. ನಾನು ಹಣ ಕೊಡಲು ಬಾಕಿ ಇದ್ದವರು ಪುರಾವೆ ಸಹಿತ ಪೊಲೀಸರ ಮೂಲಕ ಖಚಿತ ಪಡಿಸಿದಲ್ಲಿ ಹಣ ಪಾವತಿಸಲು ಸಿದ್ಧನಾಗಿದ್ದೇನೆ’ ಎಂದರು.
ಬಿಟ್ ಕಾಯಿನ್ ವ್ಯವಹಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘2016ರಲ್ಲಿ ಬಿಟ್-ಕಾಯಿನ್ ಲೀಗಲ್ ಕರೆನ್ಸಿಯಾಗಿದ್ದು, ಆಗ ನಾನೂ ವ್ಯವಹಾರ ನಡೆಸಿದ್ದೆ. 2017ರಲ್ಲಿ ಸರ್ಕಾರ ಇದನ್ನು ನಿಷೇಧಿಸಿದ ಬಳಿಕ ಬಿಟ್-ಕಾಯಿನ್ ವ್ಯವಹಾರ ಮಾಡುತ್ತಿಲ್ಲ’ ಎಂದು ತಿಳಿಸಿದರು.
‘ನನ್ನ ಮಗ ಅನುಭವ್ ಅಪಹರಣಕಾರರಲ್ಲಿ ಯಾರ ಪರಿಚಯವೂ ಇಲ್ಲ. ಪ್ರಮುಖ ಆರೋಪಿಯನ್ನು ನೋಡಿದಾಗ ಮಾತ್ರ ನಾನು ಪರಿಚಯದ ಬಗ್ಗೆ ಖಚಿತಪಡಿಸಬಲ್ಲೆ’ ಎಂದು ಹೇಳಿದರು.
ಅನುಭವ್ನ ಅಜ್ಜ ಶಿವನ್ ಮತ್ತು ತಾಯಿ ಸರಿತಾ ಮಾತನಾಡಿ, ‘ದೇವರ ಅನುಗ್ರಹದಿಂದ ಮಗ ನಮಗೆ ಸುರಕ್ಷಿತವಾಗಿ ದೊರಕಿದ್ದಾನೆ. ಪೊಲೀಸ್ ಇಲಾಖೆ, ಮಾಧ್ಯಮದವರು, ಊರಿನ ನಾಗರಿಕರು, ಶಾಸಕರು, ಸಂಸದರು ಹಾಗೂ ಸಚಿವರ ಸಹಕಾರಕ್ಕೆ ಕೃತಜ್ಞತೆ ಸಲ್ಲಿಸುವುದಾಗಿ’ ತಿಳಿಸಿದರು.
‘ಆದರೆ ನಮಗೆ ಭಯ-ಆತಂಕ ಇದೆ. ಅನುಭವ್ನನ್ನು ಅಂಗಳಕ್ಕೆ ಬಿಡಲೂ ಧೈರ್ಯವಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.