ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರೋಹಿತ್ ಚಕ್ರತೀರ್ಥ ಸಮಿತಿ ಅಧ್ಯಕ್ಷರಾಗಿರುವುದನ್ನು ಎಲ್ಲರೂ ವಿರೋಧಿಸುತ್ತಿರುವಾಗ ಸರ್ಕಾರ ಯಾಕೆ ಮೊಂಡುವಾದ ಮಾಡುತ್ತಿದೆ ಎಂದು ತಿಳಿಯುತ್ತಿಲ್ಲ. ಪಠ್ಯಪುಸ್ತಕ ಪರಿಷ್ಕರಣೆಗೆ ಸಂಬಂಧಿಸಿ ಸರ್ಕಾರ ಗೊಂದಲ ಸೃಷ್ಟಿಸುತ್ತಿದೆ. ವೆಬ್ಸೈಟ್ನಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ವಿಷಯ ಕೈಬಿಟ್ಟಿರುವುದು ಬಹಿರಂಗವಾದಾಗ, ಶಿಕ್ಷಣ ಸಚಿವರು ಕೈ ಬಿಟ್ಟಿಲ್ಲ ಎಂದಿದ್ದರು. ಈಗ ಕನ್ನಡ ಪಠ್ಯದಲ್ಲಿ ಸೇರಿಸುವುದಾಗಿ ಹೇಳಿದ್ದಾರೆ. ಪಠ್ಯದಿಂದ ತೆಗೆದಿಲ್ಲ ಎಂದಾದಲ್ಲಿ, ಮತ್ತೆ ಸೇರಿಸುವುದು ಯಾಕೆ’ ಎಂದು ಪ್ರಶ್ನಿಸಿದರು.