ಮಂಗಳೂರು: ಸಮಾನ ವೇತನ ಹಾಗೂ ನೇರ ಪಾವತಿಗೆ ಒತ್ತಾಯಿಸಿ ಮಹಾನಗರ ಪಾಲಿಕೆಯ ಹೊರಗುತ್ತಿಗೆ ನೌಕರರು ಧರಣಿ ಆರಂಭಿಸಿ, 12 ದಿನಗಳು ಕಳೆದಿದ್ದು, ನಗರದಲ್ಲಿ ತ್ಯಾಜ್ಯ ವಿಲೇವಾರಿ, ಒಳಚರಂಡಿ ಸಮಸ್ಯೆ ಬಿಗಡಾಯಿಸಿದೆ.
ಮನೆಗಳಿಂದ ಕಸ ಸಂಗ್ರಹಿಸುವ ವಾಹನಗಳು ಸರಿಯಾಗಿ ಬರುತ್ತಿಲ್ಲ, ಅಲ್ಲದೆ ರಸ್ತೆ ಬದಿಯಲ್ಲಿ ಕಸ ತುಂಬಿರುವ ಪೊಟ್ಟಣಗಳು ರಾಶಿ–ರಾಶಿ ಬಿದ್ದು ಚೆಲ್ಲಾಪಿಲ್ಲಿಯಾಗಿವೆ. ಬೀದಿನಾಯಿಗಳು ಇವನ್ನು ಕಚ್ಚಿ ಹರಿದು ಹಾಕಿದ್ದು ಕಸ ಅರ್ಧ ರಸ್ತೆಯನ್ನು ಆವರಿಸಿದೆ. ಕೊಳೆತ ತ್ಯಾಜ್ಯದ ದುರ್ನಾತದಿಂದಾಗಿ ಕೆಲವು ರಸ್ತೆಗಳಲ್ಲಿ ಸಂಚರಿಸಲು ಆಗದ ಸ್ಥಿತಿ ಇದೆ. ಒಳರಸ್ತೆಗಳಲ್ಲಂತೂ ಪರಿಸ್ಥಿತಿ ಇನ್ನೂ ಶೋಚನೀಯವಾಗಿದೆ.
ಕಾಯಂ ಪೌರ ಕಾರ್ಮಿಕರು ಎಂದಿನಂತೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದರೆ, ಕಸ ಸಂಗ್ರಹಕ್ಕೆ ಬರುವವರಲ್ಲಿ ಹೆಚ್ಚಿನವರು ಹೊರಗುತ್ತಿಗೆ ನೌಕರರಾಗಿದ್ದರು. ಅವರು ಮುಷ್ಕರದಲ್ಲಿ ಇರುವುದರಿಂದ ಕಾಯಂ ನೌಕರರಿಗೆ ಎಲ್ಲವನ್ನೂ ನಿಭಾಯಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಸಮಸ್ಯೆ ಉಲ್ಬಣಗೊಂಡಿದೆ.
ಒಳಚರಂಡಿ ನಿರ್ವಹಣೆ ಮಾಡುವವರು ಮುಷ್ಕರದಲ್ಲಿ ಇರುವುದರಿಂದ ಇವುಗಳ ಸ್ಥಿತಿ ಶೋಚನೀಯವಾಗಿದೆ. ಕೆಲವು ಕಡೆ ಉಕ್ಕಿ ರಸ್ತೆಯ ಮೇಲೆ ಹರಿಯುತ್ತಿದೆ.
‘ನಾವು ನೇರ ಪಾವತಿ ಮತ್ತು ಸಮಾನ ವೇತನವನ್ನು ಕೇಳುತ್ತಿದ್ದೇವೆ. ತಕ್ಷಣಕ್ಕೆ ಕಾಯಂ ಮಾಡಬೇಕು ಎನ್ನುತ್ತಿಲ್ಲ. ಆ ಪ್ರಕ್ರಿಯೆಯನ್ನು ಹಂತಹಂತವಾಗಿ ಮಾಡಲಿ. ಮಹಾನಗರ ಪಾಲಿಕೆ ನೇರ ಪಾವತಿ ಮಾಡಲು ಸಮಸ್ಯೆ ಏನು ಎಂಬುದು ಅರ್ಥವಾಗುತ್ತಿಲ್ಲ. ನಾವು ಕೆಲಸ ಮಾಡಿದರೆ ಗುತ್ತಿಗೆದಾರರಿಗೆ ಲಾಭವಾಗುತ್ತದೆ. ನಾವು ದುಡಿದ ಪೂರ್ಣ ಹಣವನ್ನು ನಮಗೆ ಕೊಡಲಿ’ ಎಂದು ಜಿಲ್ಲಾ ಸಫಾಯಿ ಕರ್ಮಚಾರಿ ಸಂಘದ ಅಧ್ಯಕ್ಷ ನವೀನ್ ಪ್ರತಿಕ್ರಿಯಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.