ಮಂಗಳೂರು: ಖಾತೆ ಹಂಚಿಕೆ ವಿಷಯದಲ್ಲಿ ಅತೃಪ್ತರಾಗಿರುವ ಆನಂದ್ ಸಿಂಗ್ ಅವರು ತಿಳಿಸಿರುವ ಬೇಡಿಕೆಗಳನ್ನು ಪಕ್ಷದ ದೆಹಲಿ ವರಿಷ್ಠರಿಗೆ ತಲುಪಿಸುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರಾಯಚೂರು ಜಿಲ್ಲೆದೇವದುರ್ಗ ಕ್ಷೇತ್ರದ ಶಾಸಕ ಶಿವನಗೌಡ ನಾಯಕ, ಯಾದಗಿರಿ ಸುರಪುರದ ರಾಜುಗೌಡ ಸೇರಿದಂತೆ ಅತೃಪ್ತರು ಎಂದು ಬಿಂಬಿತರಾದವರ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಈ ರೀತಿ ಪ್ರತಿಕ್ರಿಯೆ ನೀಡಿದರು.
‘ಆನಂದ್ ಸಿಂಗ್ ಕೆಲವು ವಿಷಯಗಳನ್ನು ತಿಳಿಸಿದ್ದಾರೆ. ಅದನ್ನು ಪಕ್ಷದ ವರಿಷ್ಠರಿಗೆ ತಿಳಿಸುತ್ತೇನೆ’ ಎಂದರು.
ಹುಕ್ಕಾ ಬಾರ್: ಕಾಂಗ್ರೆಸ್ ಕಚೇರಿಗಳನ್ನು ನೆಹರೂ ಹುಕ್ಕಾಬಾರ್ ಎಂದು ಬದಲಿಸಿ ಎಂಬುದಾಗಿ ಬಿಜೆಪಿ ಶಾಸಕ ಸಿ.ಟಿ. ರವಿ ಹೇಳಿಕೆ ಬಗ್ಗೆ, ಅದು ಅವರ ಅಭಿಪ್ರಾಯ, ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆ ಬಗ್ಗೆಯೂ ರವಿ ಅಭಿಪ್ರಾಯ ಹೇಳಿದ್ದಾರೆ, ಸರ್ಕಾರದ ನಿರ್ಧಾರ ನಾವು ತೀರ್ಮಾನಿಸುತ್ತೇವೆ ಎಂದರು.
ಸಾರ್ವಜನಿಕ ಗೌರವ ವಂದನೆ ಬೇಡ: ಪೊಲೀಸರು ವಿಮಾನ ನಿಲ್ದಾಣ ಮುಂತಾದ ಸಾರ್ವಜನಿಕ ಜಾಗಗಳಲ್ಲಿ ಮುಖ್ಯಮಂತ್ರಿ, ವಿಶಿಷ್ಟ ವ್ಯಕ್ತಿಗಳಿಗೆ ಗೌರವ ವಂದನೆ (ಗಾರ್ಡ್ ಆಫ್ ಆನರ್) ಸಲ್ಲಿಸುವುದು ಬೇಡ. ಪೊಲೀಸ್ ಇಲಾಖೆ ಕಾರ್ಯಕ್ರಮಗಳಲ್ಲಷ್ಟೇ ಸಾಕು ಎಂದು ತಿಳಿಸಿದ್ದೇನೆ. ಈ ಬಗ್ಗೆ ಶೀಘ್ರ ಸರ್ಕಾರಿ ಆದೇಶ ಆಗಲಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.