ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಟೀಲು ಯಕ್ಷಗಾನ ಮೇಳಕ್ಕೆ ಕಾಲಮಿತಿಯಿಂದ ಮುಕ್ತಿ

Published 8 ಜನವರಿ 2024, 16:44 IST
Last Updated 8 ಜನವರಿ 2024, 16:44 IST
ಅಕ್ಷರ ಗಾತ್ರ

ಮಂಗಳೂರು: ಕಟೀಲು ದುರ್ಗಾ‍ಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿಯ ಆರು ಮೇಳಗಳು ಮಕರ ಸಂಗ್ರಾಂತಿಯ (ಇದೇ 14) ಬಳಿಕ ಹರಕೆಯ ಯಕ್ಷಗಾನವನ್ನು ರಾತ್ರಿಯಿಂದ ಮುಂಜಾನೆವರೆಗೆ ಪ್ರದರ್ಶಿಸಲಿವೆ.

ಈ ಬಗ್ಗೆ ಹೈಕೋರ್ಟ್‌ ಇತ್ತೀಚೆಗೆ ನೀಡಿದ ತೀರ್ಪಿನ ಅನುಸಾರ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಸಮಿತಿ ಈ ನಿರ್ಧಾರವನ್ನು ಕೈಗೊಂಡಿದೆ. ಜ.14 ರಿಂದಲೇ ರಾತ್ರಿ ಪೂರ್ತಿ ಷರತ್ತುಬದ್ಧವಾಗಿ ಯಕ್ಷಗಾನ ಪ್ರದರ್ಶನಕ್ಕೆ ಕ್ರಮಕೈಗೊಳ್ಳುವಂತೆ ಮೇಳಗಳ ವ್ಯವಸ್ಥಾಪಕರಿಗೆ ಆಡಳಿತ ಸಮಿತಿಯು ನಿರ್ದೇಶನ ನೀಡಿದೆ.

ಯಕ್ಷಗಾನ ಪ್ರದರ್ಶನದ ಅವಧಿಯನ್ನು ಸಂಜೆ 5 ರಿಂದ ಮಧ್ಯರಾತ್ರಿ 12.30ಕ್ಕೆ ಸೀಮಿತಗೊಳಿಸುವಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ 2022ರ ನವೆಂಬರ್‌ 15ರಂದು ಆದೇಶ ಮಾಡಿದ್ದರು. ಯಕ್ಷಗಾನ ಪ್ರದರ್ಶನದ ಸಂದರ್ಭದಲ್ಲಿ ಧ್ವನಿಯು ಶಬ್ದ ಮಾಲಿನ್ಯ ನಿಯಂತ್ರಣ ನಿಯಮಗಳ ನಿಗದಿತ ಮಿತಿಗಿಂತ ಹೆಚ್ಚು ಇರುತ್ತದೆ ಎಂಬ ಕಾರಣಕ್ಕೆ ಆಗಿನ ಜಿಲ್ಲಾಧಿಕಾರಿ ರಾತ್ರಿ 12.30ರ ಬಳಿಕ ಯಕ್ಷಗಾನ ಪ್ರದರ್ಶನಕ್ಕೆ ನಿರ್ಬಂಧ ವಿಧಿಸಿದ್ದರು. ಇದನ್ನು ಪ್ರಶ್ನಿಸಿ ಕಟೀಲು ದೇವಸ್ಥಾನದ ಭಕ್ತರಲ್ಲಿ ಒಬ್ಬರಾದ ಕೃಷ್ಣಕುಮಾರ್‌  ಹೈಕೋರ್ಟ್‌ ಮೊರೆ ಹೋಗಿದ್ದರು.

ಶಬ್ದಮಾಲಿನ್ಯ ನಿಯಂತ್ರಣ ನಿಯಮಗಳ ಪ್ರಕಾರ ವಿಧಿಸಿರುವ ಮಿತಿಗಳನ್ನು ಅನುಸರಿಸಿ ರಾತ್ರಿ ಪೂರ್ತಿ ಯಕ್ಷಗಾನ ಪ್ರದರ್ಶನ ಏರ್ಪಡಿಸುವುದಕ್ಕೆ ಅಭ್ಯಂತರ ಇಲ್ಲ ಎಂದು ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಅವರು ಈ ಅರ್ಜಿಯ ವಿಚಾರಣೆ ವೇಳೆ ಹೈಕೋರ್ಟ್‌ಗೆ ತಿಳಿಸಿದ್ದರು. ಈ ನಿಯಮಗಳಿಗೆ ಅನುಸಾರವಾಗಿ ಯಕ್ಷಗಾನ ಪ್ರದರ್ಶಿಸಲು ಕಕ್ಷಿದಾರರು ಬದ್ಧರಿದ್ದಾರೆ ಎಂದು ಅರ್ಜಿದಾರರ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದರು. 

‘ಯಕ್ಷಗಾನ ಪ್ರದರ್ಶನವನ್ನು ಕೋವಿಡ್‌ಗೆ ಮುನ್ನ ಇದ್ದಂತೆ ರಾತ್ರಿ ಪೂರ್ತಿ ಹಮ್ಮಿಕೊಳ್ಳಲು ಜಿಲ್ಲಾಧಿಕಾರಿ ಅನುಮತಿ ನೀಡಬಹುದು. ನಿಯಮ ಉಲ್ಲಂಘನೆ ಆದರೆ ಜಿಲ್ಲಾಧಿಕಾರಿ ಸೂಕ್ತ ಕ್ರಮ ಕೈಗೊಳ್ಳಬಹುದು’ ಎಂದು ಹೈಕೋರ್ಟ್‌ ನ್ಯಾಯಮೂರ್ತಿ ಬಿ.ನಾಗಪ್ರಸನ್ನ ಅವರು ತೀರ್ಪು ನೀಡಿದ್ದರು. 

‘ಕಟೀಲು ಮೇಳಗಳ ಯಕ್ಷಗಾನಗಳು ಹರಕೆಯ ರೂಪದಲ್ಲಿ ನಡೆಯುವಂತಹವು. ಇಲ್ಲಿ ಮನರಂಜನೆಯ ವಿಚಾರ ಗೌಣ. ಯಕ್ಷಗಾನ ಪ್ರದರ್ಶನಕ್ಕೆ ಎಷ್ಟು ಪ್ರೇಕ್ಷಕರು ಇರುತ್ತಾರೆ ಎಂಬುದೂ ಇಲ್ಲಿ ಮುಖ್ಯವಲ್ಲ. ಪರಂಪರಾನುಗತವಾಗಿ ನಡೆದುಕೊಂಡು ಬಂದಂತೆ ಹರಕೆ ಹೊತ್ತ ಭಕ್ತರು ರಾತ್ರಿ ಪೂರ್ತಿ ಯಕ್ಷಗಾನ ನಡೆಸಿ ದೇವಿಯ ಕೃಪೆಗೆ ಪಾತ್ರರಾಗುವುದು ಮುಖ್ಯ. ಭಕ್ತರಿಂದ ಬೇಡಿಕೆ ಬಂದಿದ್ದರಿಂದ ಹಾಗೂ ರಾತ್ರಿಯಿಂದ ಬೆಳಗಿನವರೆಗೆ ಯಕ್ಷಗಾನ ಪ್ರದರ್ಶಿಸಲು ಇದ್ದ ಅಡೆತಡೆಗಳು ನಿವಾರಣೆ ಆಗಿದ್ದರಿಂದ ಮೊದಲಿನಂತೆ ಕಟೀಲಿನ ಆರೂ ಮೇಳಗಳ ಯಕ್ಷಗಾನವನ್ನು ರಾತ್ರಿ ಪೂರ್ತಿ ನಡೆಸಲು ತೀರ್ಮಾನಿಸಿದ್ದೇವೆ’ ಎಂದು ಎಂದು ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷ ಹಾಗೂ ಆನುವಂಶಿಕ ಮೊಕ್ತೇಸರ ಕೊಡೆತ್ತೂರು ಗುತ್ತು ಸನತ್‌ ಕುಮಾರ್‌ ಶೆಟ್ಟಿ ಅವರು ‘ಪ್ರಜಾವಾಣಿ‘ಗೆ ತಿಳಿಸಿದರು.

‘ಜಿಲ್ಲಾಡಳಿತದ ಸೂಚನೆ ಪ್ರಕಾರ ಶಬ್ದಮಾಲಿನ್ಯ ನಿಯಂತ್ರಣಕ್ಕೆ ಸಂಬಂಧಿಸಿದ ನಿಯಮಗಳನ್ನು ನಾವು ಪಾಲಿಸಬೇಕಿದೆ. ರಾತ್ರಿ ವೇಳೆ ಧ್ವನಿಯ ಮಟ್ಟ ಕಡಿಮೆಗೊಳಿಸುವುದಕ್ಕೆ ಅಗತ್ಯ  ಕ್ರಮಕೈಗೊಳ್ಳುವಂತೆ ಮೇಳಗಳ ವ್ಯವಸ್ಥಾಪಕರಿಗೆ ಸೂಚಿಸಿದ್ದೇವೆ’ ಎಂದರು. 

ರಾತ್ರಿ ಪೂರ್ತಿ ಆಟ– ಭಕ್ತರ ಹೋರಾಟ

ಕಟೀಲು ಮೇಳಗಳ ಯಕ್ಞಗಾನ ಮೊದಲಿನಂತೆಯೇ ರಾತ್ರಿಯಿಂದ ಬೆಳಗಿನವರೆಗೆ ನಡೆಯಬೇಕು ಎಂದು ಒತ್ತಾಯಿಸಿ ಭಕ್ತರು ಶ್ರೀ ಕಟೀಲು ಯಕ್ಷಸೇವಾ ಸಮನ್ವಯ ಸಮಿತಿಯ ನೇತೃತ್ವದಲ್ಲಿ ಅಲ್ಲಲ್ಲಿ ಸಭೆ ನಡೆಸಿ ಒತ್ತಾಯಿಸಿದ್ದರು. 2022ರ ನ.6ರಂದು ಬಜಪೆಯ ಶಾರದಾ ಶಕ್ತಿ ಮಂಟಪದಿಂದ ಕಟೀಲು ಕ್ಷೇತ್ರದವರೆಗೆ ’ಕಟೀಲಮ್ಮನೆಡೆ ಭಕ್ತರ ನಡೆ’ ಪಾದಯಾತ್ರೆ ಹಮ್ಮಿಕೊಂಡು ಸರ್ಕಾರದ ಮೇಲೆ ಒತ್ತಡ ಹೇರುವ ಪ್ರಯತ್ನ ನಡೆಸಿದ್ದರು. ಈ ಕುರಿತು ಕಾನೂನು ಹೋರಾಟವನ್ನೂ ನಡೆಸಿದ್ದರು.

ಕಟೀಲು ಮೇಳಗಳ ಯಕ್ಷಗಾನ ರಾತ್ರಿ ಪೂರ್ತಿ ನಡೆಯಬೇಕೆಂಬುದು ಭಕ್ತರ ಅಪೇಕ್ಷೆ. ಹೈಕೋರ್ಟ್‌ ಮೊರೆ ಹೋಗಿ ಇದಕ್ಕೆ ಅನುಮತಿ ತಂದವರೂ ಅವರೇ. ಅವರ ಕೋರಿಕೆಯನ್ನು ಈಡೇರಿಸಬೇಕಾಗುತ್ತದೆ
ಕೊಡೆತ್ತೂರು ಗುತ್ತು ಸನತ್‌ ಕುಮಾರ್‌ ಶೆಟ್ಟಿ, ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷ
ಕಟೀಲಿನ ದುರ್ಗಾಪರಮೇಶ್ವರಿ ದೇವಿಯ ಅನುಗ್ರಹವಿದು. ಕಟೀಲು ಮೇಳಗಳ ಆಟ ಹೀಗೆಯೇ ಆಗಬೇಕೆಂಬುದು ದೇವಿಯ ಪ್ರೇರಣೆ. ರಾತ್ರಿ ಪೂರ್ತಿ ಯಕ್ಷಗಾನ ನಡೆಯಲಿರುವುದು ಖುಷಿ ತಂದಿದೆ.
ಅಶೋಕ ಕೃಷ್ಣಾಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT