ಮಂಗಳೂರು: ಆಡಳಿತಾತ್ಮಕ ದೃಷ್ಟಿಯಿಂದ ಸರ್ಕಾರ ಮಾಡಿದ ವರ್ಗಾವಣೆಯನ್ನು ಮಾಜಿ ಸಚಿವ ಯು.ಟಿ. ಖಾದರ್ ಅವರು ರಾಜಕೀಯಗೊಳಿಸಿದ್ದು ದುರದೃಷ್ಟಕರ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಖಾದರ್ ಅವರ ಟ್ವೀಟ್ಗೆ ಟ್ವೀಟ್ ಮೂಲಕವೇ ಪ್ರತಿಕ್ರಿಯಿಸಿದ ಉಸ್ತುವಾರಿ ಸಚಿವರು, ಯಾವುದೇ ಆರೋಪಿಗಳನ್ನು ರಕ್ಷಿಸಲು ಇದು ಖಾದರ್ ಕಾಲವಲ್ಲ ಎಂದು ಖಾರವಾಗಿಯೇ ತಿರುಗೇಟು ನೀಡಿದ್ದಾರೆ.
ಕೊರೊನಾದಿಂದ ಮೃತಪಟ್ಟಿರುವವರ ಅಂತ್ಯ ಸಂಸ್ಕಾರದ ಸಂದರ್ಭದಲ್ಲಿ ಖಾದರ್ ಅವರು ಕಾನೂನು ಉಲ್ಲಂಘಿಸಿದ ಬಗ್ಗೆ ಕೋಟ ಅವರು ಟ್ವೀಟ್ನಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೊರೊನಾ ನಿಯಂತ್ರಣಕ್ಕೆ ಪ್ರತಿಪಕ್ಷಗಳ ಸಹಕಾರವನ್ನು ಸರ್ಕಾರ ಕೇಳಿದೆ. ದುರದೃಷ್ಟಕ್ಕೆ ಶವ ಸಂಸ್ಕಾರದ ನೆಪದಲ್ಲಿ ನಿಯಮಗಳನ್ನು ಉಲ್ಲಂಘಿಸಿ ಪ್ರಚಾರ ಪಡೆಯುತ್ತಿರುವುದು ಶೋಭೆಯಲ್ಲ ಎಂದಿದ್ದಾರೆ.
ಖಾದರ್ ಅವರು ಈ ಮುನ್ನ ಟ್ವೀಟ್ ಮೂಲಕ ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ವರ್ಗಾವಣೆಯನ್ನು ಖಂಡಿಸಿದ್ದರು. ಆರೋಪಿಗೆ ಶಿಕ್ಷೆ ನೀಡುವ ಬದಲು ಜಿಲ್ಲಾಧಿಕಾರಿಗೆ ಶಿಕ್ಷೆ ನೀಡಿದೆ ಎಂದು ಟೀಕಿಸಿದ್ದರು.