ಪುತ್ತೂರು (ದಕ್ಷಿಣ ಕನ್ನಡ): ರಾಜ್ಯ ಸರ್ಕಾರ ಜಾರಿಗೆ ತಂದಿರುವ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸೌಲಭ್ಯವನ್ನು ಬಳಸಿಕೊಂಡು ಹುಬ್ಬಳ್ಳಿಯ ಮಹಿಳೆಯೊಬ್ಬರು ಪ್ರಿಯಕರನ ಭೇಟಿಗೆ ಬಂದಿರುವ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಹುಬ್ಬಳ್ಳಿಯ ಮಹಿಳೆಯೊಬ್ಬರು ಅದೇ ಊರಿನ ಯುವಕರೊಬ್ಬರನ್ನು ಪ್ರೀತಿಸುತ್ತಿದ್ದು, ಅವರು ಕೋಡಿಂಬಾಡಿ ಭಾಗದಲ್ಲಿ ತೋಟದಲ್ಲಿ ಕೂಲಿ ಕೆಲಸಕ್ಕೆ ಬಂದಿದ್ದಾರೆ. 11 ತಿಂಗಳ ಮಗುವಿನೊಂದಿಗೆ ತವರು ಮನೆಯಲ್ಲಿದ್ದ ಆಕೆ, ಮಗುವನ್ನು ಅಲ್ಲಿಯೇ ಬಿಟ್ಟು ನಾಪತ್ತೆಯಾಗಿದ್ದರು. ಮೊಬೈಲ್ ಫೋನ್ ಕರೆಯನ್ನೂ ಸ್ವೀಕರಿಸುತ್ತಿರಲಿಲ್ಲ. ಆಕೆ ಪ್ರೀತಿಸುತ್ತಿರುವ ವಿಷಯ ತಿಳಿದಿದ್ದ ತವರು ಮನೆಯವರು, ಆಕೆ ಪ್ರಿಯಕರನ ಭೇಟಿಗೆ ಬಂದಿರಬಹುದೆಂದು ಭಾವಿಸಿ, ಪುತ್ತೂರಿಗೆ ಬಂದಿದ್ದಾರೆ.
ಪಾಲಕರು ಹುಡುಕಾಟ ನಡೆಸುತ್ತಿರುವಾಗ, ಭೇಟಿಯಾದ ಕೋಡಿಂಬಾಡಿ ಗ್ರಾಮ ಪಂಚಾಯಿತಿ ಸದಸ್ಯ ಜಯಪ್ರಕಾಶ್ ಬದಿನಾರ್ ಅವರು, ಈ ವಿಷಯವನ್ನು ಪೊಲೀಸರಿಗೆ ತಿಳಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಬಂದು, ಕೋಡಿಂಬಾಡಿಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಈ ಯುವಕನ ಮೊಬೈಲ್ ಫೋನ್ ಲೊಕೇಷನ್ ಪತ್ತೆ ಮಾಡಿದಾಗ ಅವರಿಬ್ಬರೂ ಸಿದ್ದಕಟ್ಟೆ ಟವರ್ ವ್ಯಾಪ್ತಿಯಲ್ಲಿರುವುದು ಗೊತ್ತಾಗಿದೆ.
‘ಕೈಯಲ್ಲಿ ಹಣ ಇಲ್ಲದಿದ್ದರೂ ಸಾರಿಗೆ ಸಂಸ್ಥೆ ಬಸ್ನಲ್ಲಿ ಮಹಿಳೆ ಇಲ್ಲಿಗೆ ಬಂದಿದ್ದಾರೆ. ಆಕೆ ಪುತ್ತೂರಿಗೆ ಬರಲು ಹಣ ಇಲ್ಲ ಎಂದು ಹೇಳಿದಾಗ, ಉಚಿತ ಬಸ್ ವ್ಯವಸ್ಥೆ ಇದೆ ಎಂದು ಆತ ಆಕೆಗೆ ತಿಳಿಸಿರಬೇಕು. ಹೀಗಾಗಿ ಆಕೆ ಬಂದಿದ್ದಾಳೆ. ಇಷ್ಟು ಬೇಗ ನಮ್ಮ ಕಣ್ಣು ತಪ್ಪಿಸಿ ಬರುತ್ತಾಳೆ ಅಂದುಕೊಂಡಿರಲಿಲ್ಲ’ ಎಂದು ಆ ಮಹಿಳೆಯ ತಾಯಿ ಕಣ್ಣೀರು ಹಾಕಿದರು.
ಗುರುವಾರ ಕೂಡ ಈ ಇಬ್ಬರು ಪ್ರೇಮಿಗಳು ಎಲ್ಲಿದ್ದಾರೆಂದು ಪತ್ತೆಯಾಗಿಲ್ಲ. ಈ ಸಂಬಂಧ ಯಾವುದೇ ದೂರು ದಾಖಲಾಗಿಲ್ಲ.
undefined undefined
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.