ಮಂಗಳೂರು: ನಗರದಲ್ಲಿ ಹಸಿ ಕಸ ಮತ್ತು ಒಣ ಕಸ ವಿಂಗಡಣೆ ಮಾಡುವಂತೆ ಮಹಾನಗರ ಪಾಲಿಕೆಯಿಂದ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ನಿಯಮ ಉಲ್ಲಂಘಿಸುವವರಿಗೆ ದಂಡ ವಿಧಿಸಲಾಗುತ್ತಿದೆ. ಕಸ ವಿಂಗಡಿಸದ ನಗರದ ಅಪಾರ್ಟ್ಮೆಂಟ್ಗೆ ಪಾಲಿಕೆಯಿಂದ ₹53 ಸಾವಿರ ದಂಡ ವಿಧಿಸಲಾಗಿದೆ.
ಚಿಲಿಂಬಿಯ ಈ ಅಪಾರ್ಟ್ಮೆಂಟ್ಗೆ ಪದೇ ಪದೇ ಸೂಚನೆ ನೀಡಿದ್ದರೂ, ಕಸ ವಿಂಗಡಣೆ ಮಾಡಿಲ್ಲ. ಇದರಿಂದಾಗಿ ಅನಿವಾರ್ಯವಾಗಿ ದಂಡ ವಿಧಿಸಲಾಗಿದೆ ಎಂದು ಪಾಲಿಕೆ ಆಯುಕ್ತರು ತಿಳಿಸಿದ್ದಾರೆ.
ಹಸಿ ತ್ಯಾಜ್ಯವನ್ನು ಅಪಾರ್ಟ್ಮೆಂಟ್ಗಳಲ್ಲಿ ಸಂಸ್ಕರಿಸುವಂತೆ ಸೂಚನೆ ನೀಡಲಾಗಿದೆ. ಒಣ ಕಸವನ್ನು ಮಾತ್ರ ಪಾಲಿಕೆಯ ಪೌರ ಕಾರ್ಮಿಕರು ಸಂಗ್ರಹಿಸುತ್ತಾರೆ. ಅದಾಗ್ಯೂ ಹಲವು ಅಪಾರ್ಟ್ಮೆಂಟ್ಗಳಲ್ಲಿ ಇನ್ನೂ ತ್ಯಾಜ್ಯ ಸಂಸ್ಕರಣೆ ಘಟಕಗಳನ್ನು ಅಳವಡಿಸಿಲ್ಲ.
ಈ ಎಲ್ಲ ನಿಯಮಗಳ ಉಲ್ಲಂಘನೆ ಮಾಡಿರುವುದಕ್ಕಾಗಿ ಅಪಾರ್ಟ್ಮೆಂಟ್ಗೆ ಭಾರಿ ಮೊತ್ತದ ದಂಡ ವಿಧಿಸಲಾಗಿದೆ. ಒಂದು ವೇಳೆ ದಂಡ ಪಾವತಿಸದೇ ಇದ್ದರೆ, ನೀರಿನ ಸಂಪರ್ಕವನ್ನು ಕಡಿತಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.