ಮೂಡುಬಿದಿರೆ: ಶಿರ್ತಾಡಿ ಬಸ್ ನಿಲ್ದಾಣದಲ್ಲಿ ಶುಕ್ರವಾರ ಮಧ್ಯಾಹ್ನ ನಿಲ್ಲಿಸಿದ್ದ ಕಾರಿನಿಂದ ₹ 5 ಲಕ್ಷ ನಗದು ಕಳವಾಗಿದೆ.
ಸಿವಿಲ್ ಗುತ್ತಿಗೆದಾರರಿಗೆ ಅಜಯ್ ಎಂಬುವರಿಗೆ ಸೇರಿದ ಹಣವನ್ನು ಕಳವು ಮಾಡಲಾಗಿದೆ. ಬ್ಯಾಂಕ್ನಿಂದ ನಗದೀಕರಿಸಿದ ಹಣದೊಂದಿಗೆ ಕಾರಿನಲ್ಲಿ ಶಿರ್ತಾಡಿಗೆ ತೆರಳಿದ್ದರು. ಬಸ್ ನಿಲ್ದಾಣದಲ್ಲಿ ಕಾರು ನಿಲ್ಲಿಸಿ ಪಕ್ಕದ ಹೋಟೆಲ್ಗೆ ತೆರಳಿದ್ದರು. ವಾಪಸ್ ಬರುವಷ್ಟರಲ್ಲಿ ಹಣ ಕಳವಾಗಿದೆ. ಬೈಕ್ನಲ್ಲಿ ಬಂದ ಅಪರಿಚಿತರಿಬ್ಬರು ಹಣ ಕಳವು ಮಾಡಿ ಹೋಗುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಪೊಲೀಸರಿಗೆ ಮನವಿ: ಹಗಲಲ್ಲೇ ನಡೆದಿರುವ ಕಳವು ಪ್ರಕರಣ ಜನರಲ್ಲಿ ಭೀತಿ ಉಂಟು ಮಾಡಿದ್ದು, ಆರೋಪಿಗಳನ್ನು ಪೊಲೀಸರು ಕೂಡಲೇ ಪತ್ತೆ ಹಚ್ಚಬೇಕು ಎಂದು ಆಗ್ರಹಿಸಿ ಶಿರ್ತಾಡಿ ಗ್ರಾಮ ಪಂಚಾಯಿತಿ ವತಿಯಿಂದ ಮೂಡುಬಿದಿರೆ ಪೊಲೀಸರಿಗೆ ಶನಿವಾರ ಮನವಿ ಸಲ್ಲಿಸಲಾಯಿತು.
ಪಂಚಾಯಿತಿ ಅಧ್ಯಕ್ಷೆ ಆಗ್ನೇಸ್ ಡಿಸೋಜ, ಉಪಾಧ್ಯಕ್ಷ ಸಂತೋಷ್ ಕೋಟ್ಯಾನ್, ಸದಸ್ಯ ಪ್ರವೀಣ್ ಕುಮಾರ್, ಪತ್ರಕರ್ತ ನವೀನ್ ಸಾಲ್ಯಾನ್ ಇದ್ದರು.