ಮೂಲ್ಕಿ: ಇಲ್ಲಿನ ಮೂಲ್ಕಿಯಲ್ಲಿ ಶುಕ್ರವಾರ ನಡೆದಿದ್ದ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ನಾಡು ನಿವಾಸಿಗಳಾದ ಮೊಹಮ್ಮದ್ ಹಸೀಮ್(27) ನಿಸ್ಸಾರ್ ಯಾನೆ ರಿಯಾಜ್ (33), ಮೊಹಮ್ಮದ್ ರಾಝೀಮ್(24) ಹಾಗೂ ಉಚ್ಚಿಲ ಬಡಾ ಎರ್ಮಾಳ್ನ ಅಬೂಬಕ್ಕರ್ ಸಿದ್ದಿಕ್ (27) ಎಂಬವರನ್ನು ಬಂಧಿಸಲಾಗಿದೆ.
ಎಸಿಪಿ ರಾಜೇಂದ್ರ ಮತ್ತು ಇನ್ಸ್ಪೆಕ್ಟರ್ ಜಯರಾಂ ಗೌಡ ನೇತೃತ್ವದ ರೌಡಿ ನಿಗ್ರಹ ದಳದ ಎರಡು ತಂಡಗಳನ್ನು ರಚಿಸಿ ಆರೋಪಿಗಳಿಗೆ ಶೋಧಿಸಲಾಗಿತ್ತು. ಗಂಭೀರ ಗಾಯಗೊಂಡಿರುವ ಮುನೀರ್ ಕಾರ್ನಾಡು ಹಾಗೂ ಅವರ ಮಗ ಹಯಾಝ್ನ ಮೇಲಿನ ಹಳೇ ದ್ವೇಷದ ಹಿನ್ನೆಲೆಯಲ್ಲಿ ಹಲ್ಲೆ ನಡೆದಿತ್ತು. ತಡೆಯಲು ಬಂದ ಲತೀಫ್ ಸಾವನ್ನಪ್ಪಿದ್ದನು.
ಘಟನಾ ಸ್ಥಳದ ಎರಡೂ ಬ್ಯಾಂಕ್ಗಳ ಸಿ.ಸಿ.ಟಿವಿ ಕ್ಯಾಮೆರಾದ ದೃಶ್ಯಾವಳಿಗಳಲ್ಲಿ ಕೃತ್ಯಗಳು ದಾಖಲಾಗಿದ್ದು, ತಲೆಮರೆಸಿಕೊಂಡ ಇತರ ಆರೋಪಿಗಳಿಗೆ ಶೋಧ ಮುಂದುವರಿದಿದೆ.