ಮಂಗಳೂರು: ದೇಶದಲ್ಲಿ ಈಗ ಬಿಜೆಪಿ ಸ್ವರ್ಣ ಯುಗ. ದೇಶದಲ್ಲಿ ಮೋದಿ ಹಾಗೂ ರಾಜ್ಯದಲ್ಲಿ ಯಡಿಯೂರಪ್ಪ ಆಡಳಿತ ಇದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.
ಅವರು ಇಲ್ಲಿ ನಡೆಯುತ್ತಿರುವ ಬಿಜೆಪಿಯ ರಾಜ್ಯ ವಿಶೇಷ ಸಭೆ (ಕಾರ್ಯಕಾರಿಣಿ)ಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
‘ಕರಾವಳಿ ಮಾದರಿ ರಾಜ್ಯದಲ್ಲಿ ಸಂಘಟನೆ ಮಾಡಲಾಗುವುದು. ಪೇಜ್ ಪ್ರಮುಖ್, ಪಂಚರತ್ನರ ಮೂಲಕ ಸಂಘಟನೆ ಇನ್ನಷ್ಟು ಬಲ ಪಡಿಸಲಾಗುವುದು. ರಾಜರಾಜೇಶ್ವರಿ ಮತ್ತು ಶಿರಾ ಗೆಲುವು ಮಾತ್ರವಲ್ಲ, ಮುಂದಿನ ಪಂಚಾಯತಿ ಚುನಾವಣೆಯಲ್ಲೂ ಶೇ 80ರಷ್ಟು ಗೆಲ್ಲುತ್ತೇವೆ. ಒಂದು ಸ್ಥಾನವಲ್ಲ, ಅರ್ಧ ಸ್ಥಾನವನ್ನೂ ವಿಪಕ್ಷಗಳಿಗೆ ಬಿಡುವುದಿಲ್ಲ. ಇದೇ ನಮ್ಮ ಗುರಿ. ಪ್ರತಿ ತಿಂಗಳು ಬೇರೆ ಬೇರೆ ಜಿಲ್ಲೆಗಳಲ್ಲಿ ರಾಜ್ಯ ಕಾರ್ಯಕಾರಿಣಿ ಆಯೋಜಿಸಲಾಗುವುದು’ ಎಂದರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಾರ್ಯಕಾರಿಣಿ ಉದ್ಘಾಟಿಸಿದರು.
ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಡಿ.ವಿ. ಸದಾನಂದ ಗೌಡ, ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಸಚಿವರಾದ ಜಗದೀಶ ಶೆಟ್ಟರ್, ಆರ್.ಅಶೋಕ, ಕೆ.ಎಸ್.ಈಶ್ವರಪ್ಪ, ರಾಜ್ಯ ಉಪಾಧ್ಯಕ್ಷ ಅರವಿಂದ ಲಿಂಬಾವಳಿ, ಕೋಟ ಶ್ರೀನಿವಾಸ ಇದ್ದರು.
ಇದಕ್ಕೂ ಮೊದಲು ಮುಖ್ಯಮಂತ್ರಿ ಹಾಗೂ ಗಣ್ಯರು ಚೆಂಡೆ, ಮದ್ದಳೆ ಮತ್ತಿತರ ನಿನಾದದ ಮೆರವಣಿಗೆ ಮೂಲಕ ವೇದಿಕೆಗೆ ಬಂದರು.
ಅತಿಥಿಗಳಿಗೆ ಕಟೀಲು ದುರ್ಗಾ ಪರಮೇಶ್ವರಿ ಮೂರ್ತಿ ನೀಡಿ ಸ್ವಾಗತಿಸಲಾಯಿತು.