ಮಂಗಳೂರು: ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಬಿ.ಸಿ.ರೋಡ್– ಅಡ್ಡಹೊಳೆವರೆಗಿನ 63 ಕಿ.ಮೀ ಮಾರ್ಗದ ಅಭಿವೃದ್ಧಿ ಕಾಮಗಾರಿ ಶೇ 76ರಷ್ಟು ಆಗಿದೆ. ಪೆರಿಯಶಾಂತಿಯಿಂದ ಬಿ.ಸಿ.ರೋಡ್ ವರೆಗಿನ 48 ಕಿ.ಮೀ ಉದ್ದದ ರಸ್ತೆಯಲ್ಲಿ 20 ಕಿ.ಮೀಗಳಷ್ಟು ಕಾಮಗಾರಿ ಪೂರ್ಣಗೊಂಡಿದೆ ಎಂದು ಎನ್ಎಚ್ಎಐ ಯೋಜನಾ ನಿರ್ದೇಶಕ ಜಾವೆದ್ ಆಜ್ಮಿ ಮಾಹಿತಿ ನೀಡಿದರು.
ಸಂಸದ ನಳಿನ್ ಕುಮಾರ್ ಅಧ್ಯಕ್ಷತೆಯಲ್ಲಿ ಬುಧವಾರ ಏರ್ಪಡಿಸಿದ್ದ ದಕ್ಷಿಣ ಕನ್ನಡ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ (ದಿಶಾ) ಸಮಿತಿ ಸಭೆಯಲ್ಲಿ ಅವರು ಹೆದ್ದಾರಿ ಅಭಿವೃದ್ಧಿ ಯೋಜನೆಗಳ ಮಾಹಿತಿ ಹಂಚಿಕೊಂಡರು.
‘ಮೆಲ್ಕಾರ್ನಿಂದ ಪಾಣೆಮಂಗಳೂರು ಮೇಲ್ಸೇತುವೆವರೆಗಿನ ಕಾಮಗಾರಿ ಫೆಬ್ರುವರಿ ಅಂತ್ಯಕ್ಕೆ, ಮಾಣಿ ಮೇಲ್ಸೇತುವೆ ಏಪ್ರಿಲ್ ಅಂತ್ಯಕ್ಕೆ, ಕಲ್ಲಡ್ಕ ಮೇಲ್ಸೇತುವೆಯ ಸರ್ವಿಸ್ ರಸ್ತೆ ಮಳೆಗಾಲಕ್ಕೆ ಮುನ್ನ ಹಾಗೂ ಕಲ್ಲಡ್ಕ ಮೇಲ್ಸೇತುವೆ 2025ರ ಫೆಬ್ರುವರಿಗೆ ಪೂರ್ಣಗೊಳ್ಳಲಿದೆ’ ಎಂದರು.
ರಾಷ್ಟ್ರೀಯ ಹೆದ್ದಾರಿ 169ರ ಅಭಿವೃದ್ಧಿ ಕಾಮಗಾರಿಯಲ್ಲಿ ಕುಡುಪುವಿನಿಂದ ಸಾಣೂರುವರೆಗೆ ಭೂಸ್ವಾಧೀನ ಸಮಸ್ಯೆ ಇಲ್ಲ. ಸಾಣೂರು– ಬಿಕರ್ನಕಟ್ಟೆ ನಡುವೆ ಶೇ 32ರಷ್ಟು ಕಾಮಗಾರಿ ಪೂರ್ಣಗೊಂಡಿದೆ ಎಂದು ಮಾಹಿತಿ ನೀಡಿದರು.
ಕೂಳೂರು ಸೇತುವೆ ಮುಂಬರುವ ಜೂನ್ಗೆ ಪೂರ್ಣಗೊಳ್ಳಲಿದೆ. ಕೆಪಿಟಿ ಬಳಿಯ ಮೇಲ್ಸೇತುವೆಗೆ ಹೆಚ್ಚುವರಿ ಜಾಗ ಬೇಕಾಗುತ್ತದೆ. ಸಂಸ್ಥೆಯ ಜಾಗವನ್ನು ಇದಕ್ಕೆ ಬಿಟ್ಟುಕೊಡುವುದಕ್ಕೆ ಅನುಮತಿ ಕೋರಿ ಕೆಪಿಟಿಯ ಆಡಳಿತ ಮಂಡಳಿಯವರು ಈ ಸಂಸ್ಥೆಯವರು ತಾಂತ್ರಿಕ ಶಿಕ್ಷಣ ಆಯುಕ್ತರಿಗೆ ಪತ್ರ ಬರೆದಿದ್ದಾರೆ ಎಂದು ಜಾವೆದ್ ಆಜ್ಮಿ ತಿಳಿಸಿದರು.
ಜಿಲ್ಲಾಡಳಿತದ ಹಂತದಲ್ಲೇ ಈ ಜಾಗವನ್ನು ಬಿಟ್ಟುಕೊಡಲು ಸಾಧ್ಯವೇ ಎಂಬುದನ್ನು ಪರಿಶೀಲಿಸುವುದಾಗಿ ಜಿಲ್ಲಾಧಿಕಾರಿ ತಿಳಿಸಿದರು.
ನಂತೂರು ಸೇತುವೆ ಕಾಮಗಾರಿಗೆ ನ್ಯಾಯಾಲಯ ತಡೆಯಾಜ್ಞೆ ನೀಡಿದೆ ಎಂದು ಆಜ್ಮಿ ಮಾಹಿತಿ ನೀಡಿದರು.