ಮಂಗಳೂರು: ಎನ್ಐಟಿಕೆ ತಾಂತ್ರಿಕ ವಿಶ್ವವಿದ್ಯಾಲಯವು ಆಹಾರ ಪದಾರ್ಥಗಳನ್ನು ಶೇಖರಿಸಿ, ತಯಾರಿಸಲು ಸಿದ್ಧವಾಗಿರುವಂತಹ ತಂತ್ರಜ್ಞಾನವನ್ನು ಸಂಶೋಧಿಸಿದ್ದು, ಅದನ್ನು ಬೆಂಗಳೂರಿನ ಎನ್ಜಿವಿ ನ್ಯಾಚುರಲ್ಸ್ ಕಂಪನಿಗೆ ವರ್ಗಾವಣೆ ಮಾಡಲಾಯಿತು.
ತಂತ್ರಜ್ಞಾನದ ಸಂಶೋಧಕ ಡಾ.ಪ್ರಸನ್ನ ಬಿ.ಡಿ., ಅಧಿಕಾರಿಗಳಾದ ಪ್ರೊ. ಅನಂತನಾರಾಯಣ ವಿ.ಎಸ್., ಪ್ರೊ. ಶ್ರೀಪತಿ ಆಚಾರ್ಯ, ಡಾ. ಸುಬ್ರಾಯ್ ಹೆಗಡೆ ಹಾಗೂ ಎನ್ಜಿವಿ ನ್ಯಾಚುರಲ್ಸ್ನ ಸ್ಥಾಪಕ ನವೀನ್ ಹಾಜರಿದ್ದರು.
ಎನ್ಜಿವಿ ನ್ಯಾಚುರಲ್ಸ್ ಖಾಸಗಿ ಒಡೆತನದ ಆಹಾರ ಸಂಸ್ಕರಣಾ ಕಂಪನಿಯಾಗಿದ್ದು, ಎನ್ಐಟಿಕೆ ತಾಂತ್ರಿಕ ವಿಶ್ವವಿದ್ಯಾಲಯದ ಈ ಹೊಸ ಸಂಶೋಧನೆಯನ್ನು ಮೆಚ್ಚಿ. ಅದನ್ನು ವರ್ಗಾವಣೆ ಮಾಡಿಕೊಳ್ಳುವ ಔಪಚಾರಿಕ ಪ್ರಕ್ರಿಯೆಗಳನ್ನು ಶುಕ್ರವಾರ ಪೂರೈಸಿತು.
ಎನ್ಐಟಿಕೆ ತಾಂತ್ರಿಕ ವಿಶ್ವವಿದ್ಯಾಲಯದ ಕೆಮಿಕಲ್ ಎಂಜಿನಿಯರಿಂಗ್ನ ಸಹ ಪ್ರಾಧ್ಯಾಪಕ ಡಾ.ಪ್ರಸನ್ನ ಬಿ.ಡಿ. ಅವರು, ಕಾಡಲ್ಲಿ ಮತ್ತು ನಾಡಲ್ಲಿ ಸಿಗುವಂತಹ ಗೆಡ್ಡೆ-ಗೆಣಸುಗಳಲ್ಲಿನ ತುರಿಕೆಯ ಅಂಶವನ್ನು ಹೋಗಲಾಡಿಸಿ, ಅವು ಹಾಳಾಗದಂತೆ ಹಲವಾರು ತಿಂಗಳುಗಳ ಕಾಲ ಶೇಖರಿಸಿಡುವಂತಹ ತಂತ್ರಜ್ಞಾನ ಸಂಶೋಧಿಸಿದ್ದಾರೆ.
ಈಗಾಗಲೇ ರೈತರು ಬೆಳೆಯುವ ಹಲವಾರು ಗೆಡ್ಡೆ ಗೆಣಸುಗಳನ್ನು ಬಳಸುವುದರಿಂದ ಗಂಟಲಲ್ಲಿ ತುರಿಕೆಯ ಸಮಸ್ಯೆಗಳು ಎದುರಾಗುತ್ತದೆ. ಅದನ್ನು ಉಪಯೋಗ ಯೋಗ್ಯವಾಗಿ ಬಳಸಲು ಹಲವಾರು ವಿಧಾನಗಳಿದ್ದರೂ, ಅವು ಬಹಳ ಸಮಯ ತೆಗೆದುಕೊಳ್ಳುತ್ತವೆ. ಅಲ್ಲದೇ ಅವುಗಳನ್ನು ತುಂಬಾ ದಿನಗಳ ಕಾಲ ಶೇಖರಿಸಿಡಲು ಸಾಧ್ಯವಿಲ್ಲದಾಗಿತ್ತು. ಈ ಸಂಶೋಧನೆಯಿಂದ ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ ಎಂದು ಡಾ.ಪ್ರಸನ್ನ ತಿಳಿಸಿದರು.