ಪುತ್ತೂರು: ಶ್ರೀನಿವಾಸ ಕಲ್ಯಾಣೋತ್ಸವಕ್ಕೆ ಸಂಬಂಧಿಸಿ ನಗರದಲ್ಲಿ ಅಳವಡಿಸಿರುವ ಫಲಕಗಳನ್ನು ತೆರವು ಮಾಡುವಂತೆ ಪುತ್ತೂರು ನಗರಸಭೆಯ ಉಪಚುನಾವಣೆಯ ಮಾದರಿ ನೀತಿ ಸಂಹಿತೆ ಅನುಷ್ಠಾನದ ನೋಡೆಲ್ ಅಧಿಕಾರಿಯವರು ಪುತ್ತಿಲ ಪರಿವಾರದ ಅಭ್ಯರ್ಥಿಗಳಿಬ್ಬರಿಗೆ ಶುಕ್ರವಾರ ನೋಟೀಸ್ ಜಾರಿಗೊಳಿಸಿದ್ದಾರೆ.
‘ಪುತ್ತಿಲ ಪರಿವಾರದವರು ರಾಜಕೀಯ ದೃಷ್ಟಿಯಿಂದ ಶ್ರೀನಿವಾಸ ಕಲ್ಯಾಣೋತ್ಸವದ ಕರಪತ್ರ ಹಂಚುವ ಮೂಲಕ ಮತದಾರರಿಗೆ ಆಮಿಷ ಒಡ್ಡುತ್ತಿದ್ದಾರೆ’ ಎಂಬ ದೂರಿನ ಆಧಾರದಲ್ಲಿ ಅಧಿಕಾರಿಯು ಈ ಕ್ರಮ ಕೈಗೊಂಡಿದ್ದಾರೆ. ನೋಟಿಸ್ ತಲುಪಿದ 24 ಗಂಟೆ ಗಳ ಒಳಗೆ ಕಾರ್ಯಕ್ರಮದ ಫಲಕಗಳನ್ನು ತೆರವುಗೊಳಿಸಿ ವರದಿ ಮಾಡುವಂತೆ ಸೂಚಿಸಲಾಗಿದೆ.
ಪುತ್ತೂರು 11ನೇ ವಾರ್ಡ್ ನೆಲ್ಲಿಕಟ್ಟೆಯ ವ್ಯಾಪ್ತಿಯ ಮತದಾರರಿಗೆ ಶ್ರೀನಿವಾಸ ಕಲ್ಯಾಣೋತ್ಸವ ಎಂಬ ಕರಪತ್ರ ಹಂಚಲಾಗುತ್ತಿದೆ. ಪುತ್ತೂರು ನಗರಸಭಾ ಉಪಚುನಾವಣೆಯ ಪ್ರಕ್ರಿಯೆಗಳು ನಡೆಯುತ್ತಿರುವಾಗ ‘ಪುತ್ತಿಲ ಪರಿವಾರ’ ಬೆಂಬಲಿತ ಅಭ್ಯರ್ಥಿಗಳಾದ ಅನ್ನಪೂರ್ಣ ಎನ್.ಕೆ ರಾವ್ ಹಾಗೂ ಚಿಂತನ್ ಪಿ. ಅವರು ಕರಪತ್ರಗಳಲ್ಲಿ ಮಹಾಲಿಂಗೇಶ್ವರ ದೇವರ ಚಿತ್ರ ಹಾಗೂ ಪುತ್ತಿಲ ಪರಿವಾರ ಚಿಹ್ನೆ ಬಳಸುವ ಮೂಲಕ ಮತದಾರರ ಮೇಲೆ ಪ್ರಭಾವ ಬೀರುತ್ತಿದ್ದಾರೆ. ಚುನಾವಣಾ ಅಧಿಕಾರಿಗಳು ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಕೆಲವರು ಆಗ್ರಹಿಸಿದ್ದರು.
‘ಹಣದ ಲಾಬಿ, ಉಚಿತ ಊಟ, ತಿಂಡಿ ಬಟ್ಟೆ, ದೇವರ ಪ್ರಸಾದ ನೀಡುವ ಆಮಿಷವನ್ನು ಈ ಕಾರ್ಯಕ್ರಮದ ಮೂಲಕ ಪುತ್ತಿಲ ಪರಿವಾರ ಮಾಡುತ್ತಿದೆ ಎಂದು ಸಾಮಾಜಿಕ ಜಾಲತಾಣದ ಮೂಲಕ ದೂರು ದಾಖಲಾಗಿದೆ’ ಎಂದು ನೋಟೀಸ್ನಲ್ಲಿ ತಿಳಿಸಲಾಗಿದೆ.