ಮಂಗಳೂರು: ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದ ಅಪರಾಧಿಗೆ ನಗರದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ (ಪೊಕ್ಸೊ) ಹಾಗೂ ತ್ವರಿತಗತಿ–1 ನ್ಯಾಯಾಲಯದ ನ್ಯಾಯಾಧೀಶರಾದ ಮಂಜುಳಾ ಇಟ್ಟಿ ಅವರು ಐದು ವರ್ಷ ಸಜೆ ಹಾಗೂ ₹ 1 ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ನೊಂದ ಬಾಲಕಿಗೆ ₹ 1 ಲಕ್ಷ ಪರಿಹಾರ ನೀಡುವಂತೆಯೂ ಆದೇಶ ಮಾಡಿದ್ದಾರೆ.
ನಗರದ ಕಾಪಿಕಾಡು ನಿವಾಸಿ ಶೇಖರ ಅಲಿಯಾಸ್ ಜೆ.ಡಿ.ಚಂದ್ರಶೇಖರ್ ಶಿಕ್ಷೆಗೆ ಒಳಗಾದ ಅಪರಾಧಿ.
ನಗರದ ವಾರ್ಡ್ ಒಂದರಲ್ಲಿ 2022ರ ಜೂನ್ 21ರಂದು ವಾಹನ ನಿಲುಗಡೆ ಸ್ಥಳದ ಸಮೀಪ ಪೇಂಟಿಂಗ್ ಮಾಡುತ್ತಿದ್ದ ಶೇಖರ, ಅಲ್ಲಿ ನಡೆದುಕೊಂಡು ಹೋಗುತ್ತಿದ್ದ ಬಾಲಕಿಯ ಕೈಯನ್ನು ಹಿಡಿದು ಎಳೆದು, ಹಿಂದಿನಿಂದ ತಬ್ಬಿಕೊಂಡು ಎದೆ ಭಾಗವನ್ನು ಮುಟ್ಟಿ ಕಿರುಕುಳ ನೀಡಿದ್ದ.
ಈ ಬಗ್ಗೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಲೈಂಗಿಕ ದೌರ್ಜನ್ಯದಿಂದ ಮಕ್ಕಳ ರಕ್ಷಣೆ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಪಿಎಸ್ಐ ಶ್ರೀಕಲಾ ಅವರು ದೋಷಾರೋಪ ಪಟ್ಟಿ ಸಲ್ಲಿಸಿದ್ದರು ಸರ್ಕಾರದ ವಿಶೇಷ ವಕೀಲರಾದ ಸಹನಾ ದೇವಿ ಅವರು ಸಂತ್ರಸ್ತೆ ಪರವಾಗಿ ವಾದಿಸಿದ್ದರು.