ಮಂಗಳೂರು: ವಂಚನೆ ಆರೋಪಕ್ಕೆ ಗುರಿಯಾಗಿರುವ ಮಂಜೇಶ್ವರ ಶಾಸಕ ಎಂ.ಸಿ. ಖಮರುದ್ದೀನ್ ರಾಜೀನಾಮೆ ನೀಡಬೇಕು. ಕೂಡಲೇ ಶಾಸಕರನ್ನು ಬಂಧಿಸಬೇಕು ಎಂದು ಒತ್ತಾಯಿಸಿ ಬಿಜೆಪಿ ವತಿಯಿಂದ ಸೋಮವಾರ ಕಾಸರಗೋಡು ತಾಲ್ಲೂಕು ಕಚೇರಿಗೆ ಜಾಥಾ ನಡೆಸಲಾಯಿತು.
ಮೆರವಣಿಗೆ ಮೂಲಕ ಬಂದ ಕಾರ್ಯಕರ್ತರು ಬ್ಯಾರಿಕೇಡ್ಗಳನ್ನು ಕಿತ್ತು, ತಾಲ್ಲೂಕು ಕಚೇರಿಗೆ ಒಳನುಗ್ಗಲು ಯತ್ನಿಸಿದರು. ಈ ಸಂದರ್ಭದಲ್ಲಿ ಪೊಲೀಸರು ಮೂರು ಬಾರಿ ಜಲಫಿರಂಗಿ ಪ್ರಯೋಗಿಸಿದರು.
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಕೆ. ಶ್ರೀಕಾಂತ್ ಜಾಥಾ ಉದ್ಘಾಟಿಸಿದರು. ಉಪಾಧ್ಯಕ್ಷ ಸದಾನಂದ ರೈ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಘಟಕದ ಕಾರ್ಯದರ್ಶಿ ಎನ್. ಸತೀಶ್, ಸವಿತಾ ಟೀಚರ್, ಮಹಿಳಾ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷೆ ಎಂ. ಜನನಿ, ಯುವ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಧನಂಜಯ ಮಧೂರು, ಪಿ.ಆರ್. ಸುನಿಲ್, ಹರೀಶ್ ನಾರಂಪಾಡಿ, ಸುಕುಮಾರ ಕುದ್ರೆಪ್ಪಾಡಿ ನೇತೃತ್ವ ವಹಿಸಿದ್ದರು.
ಸಚಿವ ಜಲೀಲ್ ರಾಜೀನಾಮೆಗೆ ಆಗ್ರಹ:ಜಾರಿ ನಿರ್ದೇಶನಾಲಯದ ವಿಚಾರಣೆಗೆ ಒಳಗಾಗಿರುವ ಕೇರಳ ಉನ್ನತ ಶಿಕ್ಷಣ ಸಚಿವ ಕೆ.ಟಿ. ಜಲೀಲ್ ರಾಜೀನಾಮೆಗೆ ಒತ್ತಾಯಿಸಿ ಎಂಎಸ್ಎಫ್ ವಿದ್ಯಾರ್ಥಿ ಸಂಘಟನೆ ಸೋಮವಾರ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ಎದುರು ನಡೆಸಿದ ಪ್ರತಿಭಟನೆಯನ್ನು ನಿಯಂತ್ರಿಸಲು ಪೊಲೀಸರು ಜಲಫಿರಂಗಿ ಬಳಸಿದರು.
ವಿದ್ಯಾನಗರದಿಂದ ಮೆರವಣಿಗೆ ಮೂಲಕ ಬಂದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಪ್ರವೇಶ ದ್ವಾರದ ಬಳಿ ಹಾಕಿದ್ದ ಬ್ಯಾರಿಕೇಡ್ ತಳ್ಳಿ ಮುನ್ನುಗ್ಗಲು ಯತ್ನಿಸಿದರು. ಪೊಲೀಸರು ಜಲಫಿರಂಗಿ ಪ್ರಯೋಗಿಸಿದರು. ಪೊಲೀಸರು ಮತ್ತು ಪ್ರತಿಭಟನಕಾರರ ನಡುವೆ ತಳ್ಳಾಟ ನಡೆಯಿತು.
ಬಳಿಕ ಪ್ರತಿಭಟನೆಗೆ ಮಂಜೇಶ್ವರ ಬ್ಲಾಕ್ ಪಂಚಾಯಿತಿ ಅಧ್ಯಕ್ಷ ಎ.ಕೆ.ಎಂ. ಅಶ್ರಫ್ ಚಾಲನೆ ನೀಡಿದರು. ಎಂಎಸ್ಎಫ್ ಜಿಲ್ಲಾ ಘಟಕದ ಅಧ್ಯಕ್ಷ ಇರ್ಷಾದ್ ಮೊಗ್ರಾಲ್, ಅಶ್ರಫ್ ಎಡನೀರು, ಆಬಿದ್ ಅರಂಗಾಡಿ, ಅಝರುದ್ದೀನ್, ಸಿದ್ದಿಕ್ ಮಂಜೇಶ್ವರ, ಶಹಾದ್, ಶಾಹ ನವಾಜ್, ಇರ್ಷಾದ್ ಮೊಗ್ರಾಲ್ ನೇತೃತ್ವ ವಹಿಸಿದ್ದರು.