ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪುತ್ತೂರಿನಲ್ಲಿ ಬಿಜೆಪಿ ಇನ್ನೆಂದೂ ಸೋಲದು: ಅರುಣ್‌ಕುಮಾರ್‌ ಪುತ್ತಿಲ

ಪುತ್ತೂರು ಬಿಜೆಪಿ ಕಚೇರಿಗೆ ಭೇಟಿ ನೀಡಿದ ಅರುಣ್ ಕುಮಾರ್ ಪುತ್ತಿಲ
Published 17 ಮಾರ್ಚ್ 2024, 15:16 IST
Last Updated 17 ಮಾರ್ಚ್ 2024, 15:16 IST
ಅಕ್ಷರ ಗಾತ್ರ

ಪುತ್ತೂರು: ‘ಇವತ್ತು ನಾವೆಲ್ಲ ಮುಕ್ತ ಮನಸ್ಸಿನಿಂದ ಜತೆಯಾಗಿದ್ದು, ಮುಂದೆ ಪುತ್ತೂರಿನಲ್ಲಿ ಬಿಜೆಪಿ ಎಂದೂ ಸೋಲದು ಎಂಬ ಸಂದೇಶವನ್ನು ಸಮಾಜಕ್ಕೆ ರವಾನಿಸಿದ್ದೇವೆ. ಪಕ್ಷ ನೀಡಿರುವ ಸೂಚನೆಯನ್ನು ಪಾಲಿಸಿ, ಪಕ್ಷಕ್ಕೆ ನ್ಯಾಯ ನೀಡುವ ಮತ್ತು ನರೇಂದ್ರ ಮೋದಿ ಅವರನ್ನು ಮತ್ತೆ ಪ್ರಧಾನಿಯಾಗಿಸುವ ಜವಾಬ್ದಾರಿಯನ್ನು ನಾವು ನಿರ್ವಹಿಸಲಿದ್ದೇವೆ’ ಎಂದು ಅರುಣ್‌ಕುಮಾರ್‌ ಪುತ್ತಿಲ ಹೇಳಿದರು.

ಬಿಜೆಪಿಗೆ ಮರುಸೇರ್ಪಡೆಗೊಂಡ ಬಳಿಕ ಪುತ್ತೂರಿನ ಬಿಜೆಪಿ ಕಾರ್ಯಾಲಯಕ್ಕೆ ಭಾನುವಾರ ಪುತ್ತಿಲ ಪರಿವಾರದ ನಾಯಕರೊಂದಿಗೆ ಭೇಟಿ ನೀಡಿದ ಅವರು ಮಾತನಾಡಿದರು.

‘ಈ ಹಿಂದೆ ಒಂದಷ್ಟು ಗೊಂದಲ ಆಗಿರುವುದು, ಎರಡೂ ಭಾಗಗಳಿಂದಲೂ ನೋವು ಆಗಿರುವುದು ಸಹಜ. ನಾವಿದನ್ನು ಒಪ್ಪಿಕೊಳ್ಳುತ್ತೇವೆ. ಆದರೆ, ಆ ನೋವುಗಳನ್ನು ನಾವೆಲ್ಲ ಇಂದು ಮರೆತಿದ್ದೇವೆ. ಮಂದೆ ನಾವೆಲ್ಲ ಅಣ್ಣ ತಮ್ಮಂದಿರಂತೆ, ಅಕ್ಕ ತಂಗಿಯರಂತೆ ಪಕ್ಷಕ್ಕಾಗಿ ಕೆಲಸ ಮಾಡಲು ಬದ್ಧರಾಗಿದ್ದೇವೆ. ಈ ಕ್ಷಣದಿಂದಲೇ ನಾವೆಲ್ಲ ಪಕ್ಷ ಕೊಟ್ಟಿರುವ ಕೆಲಸವನ್ನು ನಿರ್ವಹಿಸಿಕೊಂಡು ಲೋಕಸಭಾ ಚುನಾವಣೆಯಲ್ಲಿ ಕ್ಯಾ.ಬೃಜೇಶ್ ಚೌಟ ಅವರನ್ನು ನಾಲ್ಕು ಲಕ್ಷಕ್ಕೂ ಅಧಿಕ ಮತಗಳ ಅಂತರದಲ್ಲಿ ಗೆಲ್ಲಿಸುವ ಯೋಚನೆ ಮಾಡಿದ್ದೇವೆ. ಎಲ್ಲ ಕಾರ್ಯಕರ್ತರು ಈ ಕೆಲಸ ಮಾಡಿದರೆ ಯಾವುದೇ ಕಾರ್ಯ ಕಷ್ಟವಾಗುವುದಿಲ್ಲ’ ಎಂದರು.

‘ಪಕ್ಷದ ವಿಚಾರದಲ್ಲಿ ನಮ್ಮ ಸಂಘ, ನಾಯಕರ ವಿರುದ್ಧ ಯಾರೂ ವೈಯುಕ್ತಿಕ ವಿಚಾರ ಮುಂದಿಟ್ಟು ಸಾಮಾಜಿಕ ಜಾಲತಾಣದಲ್ಲಿ ಯಾವುದೇ ಸಂದೇಶ ರವಾನಿಸಬಾರದು. ಸಾಮಾಜಿಕ ಜಾಲತಾಣದ ವಿಷಯ ಬಿಟ್ಟು ನಾವೆಲ್ಲ ನಮ್ಮ ಬೂತ್‌ನಲ್ಲಿ ಕೆಲಸ ಮಾಡಬೇಕು’ ಎಂದು ವಿನಂತಿಸಿಕೊಂಡರು.

ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ನಗರ ಬಿಜೆಪಿ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್ ಅವರು ಅರುಣ್ ಕುಮಾರ್ ಪುತ್ತಿಲ ಅವರನ್ನು ಪಕ್ಷದ ಕಚೇರಿಗೆ ಸ್ವಾಗತಿಸಿದರು. ಪುತ್ತಿಲ ಪರಿವಾರದಲ್ಲಿ ಗುರುತಿಸಿಕೊಂಡಿದ್ದ ಪರಿವಾರದ ಅಧ್ಯಕ್ಷ ಪ್ರಸನ್ನಕುಮಾರ್ ಮಾರ್ತ, ಪ್ರಧಾನ ಕಾರ್ಯದರ್ಶಿ ಉಮೇಶ್ ಕೋಡಿಬೈಲು, ಪ್ರಮುಖರಾದ ಅನಿಲ್ ತೆಂಕಿಲ, ರವಿಕುಮಾರ್ ರೈ ಜತೆಗಿದ್ದರು.

ಬಿಜೆಪಿ ಹಿರಿಯ ಮುಖಂಡ ಬೂಡಿಯಾರು ರಾಧಾಕೃಷ್ಣ ರೈ, ಬಿಜೆಪಿ ಹಿಂದುಳಿದ ಮೋರ್ಚಾದ ರಾಜ್ಯ ಘಟಕದ ಕಾರ್ಯದರ್ಶಿ ಆರ್.ಸಿ.ನಾರಾಯಣ, ಬಿಜೆಪಿ ಗ್ರಾಮಾಂತರ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಪುರುಷೋತ್ತಮ ಮುಂಗ್ಲಿಮನೆ, ನಿತೀಶ್‌ಕುಮಾರ್ ಶಾಂತಿವನ, ನಗರ ಮಂಡಲ ಪ್ರಧಾನ ಕಾರ್ಯದರ್ಶಿ ಯುವರಾಜ್ ಪೆರಿಯತ್ತೋಡಿ, ಹರಿಪ್ರಸಾದ್ ಯಾದವ್, ಜಿಲ್ಲಾ ಕಾರ್ಯದರ್ಶಿ ವಿದ್ಯಾ ಆರ್.ಗೌರಿ, ಪಕ್ಷದ ಮುಖಂಡರಾದ ಸಹಜ್ ರೈ ಬಳೆಜ್ಜ, ಸುರೇಶ್ ಕಣ್ಣರಾಯ, ಸುಧೀರ್ ಶೆಟ್ಟಿ, ಜ್ಯೋತಿ ಆರ್.ನಾಯಕ್, ರಾಧಾಕೃಷ್ಣ ನಂದಿಲ, ಇಂದುಶೇಖರ್, ಲೋಹಿತ್ ಅಮ್ಮಿನಡ್ಕ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT