ಮೂಡುಬಿದಿರೆ: ‘ದೇವರು ನಮಗೇನು ಕೊಡುತ್ತಾನೆ ಎಂಬುದಕ್ಕಿಂತ ನಾವು ದೇವರ ಮೇಲೆ ತೋರುವ ಭಕ್ತಿ ಮುಖ್ಯ. ಸಮರ್ಪಣಾ ಭಕ್ತಿ, ಭಾವದಿಂದ ಮಾಡುವ ಕೆಲಸದಲ್ಲಿ ಯಶಸ್ಸು ನಮ್ಮದಾಗುತ್ತದೆ’ ಎಂದು ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ್ ಸ್ವಾಮೀಜಿ ಹೇಳಿದರು.
ಸುವರ್ಣ ಮಹೋತ್ಸವ ಸಂಭ್ರಮದಲ್ಲಿರುವ ಮಿತ್ತಬೈಲು ರಾಮ ಮಂದಿರದಲ್ಲಿ ಅವರ ಮೊಕ್ಕಾಂಗಾಗಿ ಪುರಪ್ರವೇಶ ಮಾಡಿದ ಬಳಿಕ ಭಕ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು.
ಮಂದಿರದ ನವೀಕೃತ ಸಭಾಗೃಹವನ್ನು ಸ್ವಾಮೀಜಿ ಉದ್ಘಾಟಿಸಿದರು. ಮಂದಿರದ ಆಡಳಿತ ಮಂಡಳಿ ಪರವಾಗಿ ಅಧ್ಯಕ್ಷ ಗಿರಿಧರ್ ಪಿ.ನಾಯಕ್ ದಂಪತಿ ಪಾದಪೂಜೆ ನೆರವೇರಿಸಿದರು.
ಆಡಳಿತ ಮಂಡಳಿ, ಮೂಡುಬಿದಿರೆ ಪೇಟೆಯ ವೆಂಕಟರಮಣ ಮತ್ತು ಹನುಮಂತ ದೇವಸ್ಥಾನದ ಆಡಳಿತ ಮೊಕ್ತೇಸರ ಜಿ.ಉಮೇಶ್ ಪೈ, ಮೊಕ್ತೇಸರರಿಗೆ ಸ್ವಾಮೀಜಿ ಫಲಮಂತ್ರಾಕ್ಷತೆ ನೀಡಿದರು. ಮಂದಿರದ ನವೀಕೃತ ಸಭಾಗೃಹ ಸಹಿತ ಅಭಿವೃದ್ಧಿ ಕಾರ್ಯಗಳಲ್ಲಿ ಗಮನಾರ್ಹ ಕೊಡುಗೆ ನೀಡಿರುವ ಗೋವರ್ಧನ ನಾಯಕ್ ಮತ್ತು ಪುಲ್ಕೇರಿ ಪಾಂಡು ರಂಗ ಕಾಮತ್ ದಂಪತಿಯನ್ನು ಗೌರವಿಸಿದರು.
ಮಂದಿರದ ಆಡಳಿತ ಮಂಡಳಿ ಕಾರ್ಯದರ್ಶಿ ನಿತ್ಯಾನಂದ ಕಾಮತ್, ಕೋಶಾಧಿಕಾರಿ ಗೋವಿಂದ ಪ್ರಭು, ಟ್ರಸ್ಟಿಗಳಾದ ವಾಸುದೇವ ಪಿ.ನಾಯಕ್, ಶಶಿಧರ ಪಿ.ನಾಯಕ್, ನಾಗರಾಜ ಪ್ರಭು, ನರಸಿಂಹ ನಾಯಕ್, ಅನಂತ ಪ್ರಭು, ನಿರ್ವಾಹಕ ವೆಂಕಟೇಶ್ ಪೈ ಭಾಗವಹಿಸಿದ್ದರು.
ಟ್ರಸ್ಟಿ ರಮೇಶ್ ನಾಯಕ್ ಸ್ವಾಗತಿಸಿದರು.
ಕುಮಟಾ ಮೊಕ್ಕಾನಿಂದ ಮಿತ್ತಬೈಲು ಪೇಟೆಗೆ ಪ್ರವೇಶಿಸುವ ಹಾದಿಯಲ್ಲಿ ಸ್ವಾಮೀಜಿಯನ್ನು ಮಂದಿರದ ಆಡಳಿತ ಮಂಡಳಿ ಮತ್ತು ಸಮಾಜ ಬಾಂಧವರ ಉಪಸ್ಥಿತಿಯಲ್ಲಿ ಸ್ವಾಗತಿಸಲಾಯಿತು.