ಮಂಗಳೂರು: ಪ್ರಯಾಣಿಕರ ಕೊರತೆಯಿಂದಾಗಿ ವಾರದಲ್ಲಿ ನಾಲ್ಕು ದಿನ ಸಂಚರಿಸುತ್ತಿದ್ದ ಕೆಎಸ್ಆರ್ ಬೆಂಗಳೂರು–ಮಂಗಳೂರು ಸೆಂಟ್ರಲ್– ಕೆಎಸ್ಆರ್ ಬೆಂಗಳೂರು (ರೈ.ಸಂ. 06515/06516) ರೈಲು ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಕುಣಿಗಲ್, ಶ್ರವಣಬೆಳಗೂಳ ಮಾರ್ಗವಾಗಿ ಇತ್ತೀಚೆಗಷ್ಟೇ ಆರಂಭವಾಗಿದ್ದ ಈ ರೈಲಿನಲ್ಲಿ ಪ್ರಯಾಣಿಕರ ಸಂಖ್ಯೆ ಅತ್ಯಂತ ಕಡಿಮೆಯಾಗಿತ್ತು. ಇದೀಗ ಈ ರೈಲು ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ನೈರುತ್ಯ ರೈಲ್ವೆ ತಿಳಿಸಿದೆ.
ಬೆಂಗಳೂರಿನಿಂದ ಮಂಗಳೂರಿಗೆ ಹೊರಡುವ ರೈಲು ಸಂಚಾರವನ್ನು ಇದೇ 7 ರಿಂದ ಹಾಗೂ ಮಂಗಳೂರು ಸೆಂಟ್ರಲ್ನಿಂದ ಬೆಂಗಳೂರಿಗೆ ಹೊರಡುವ ರೈಲು ಸಂಚಾರ ಇದೇ 11 ರಿಂದ ರದ್ದುಗೊಳಿಸಲಾಗಿದೆ.
ಮೈಸೂರು ಮಾರ್ಗವಾಗಿ ವಾರದಲ್ಲಿ ಮೂರು ದಿನ ಮಂಗಳೂರಿನಿಂದ ಬೆಂಗಳೂರಿಗೆ ತೆರಳುವ ರೈಲಿನ ವೇಳಾಪಟ್ಟಿಯನ್ನೂ ಪರಿಷ್ಕರಿಸಲಾಗಿದೆ.
ಕೆಎಸ್ಆರ್ ಬೆಂಗಳೂರು– ಮಂಗಳೂರು ಸೆಂಟ್ರಲ್ (ರೈ.ಸಂ. 06517) ರೈಲು ಇದೇ 7 ರಿಂದ ಪ್ರತಿ ಬುಧವಾರ, ಶುಕ್ರವಾರ ಹಾಗೂ ಭಾನುವಾರ ಸಂಚರಿಸಲಿದೆ. ಈ ಮೊದಲು ಈ ರೈಲು ಭಾನುವಾರ, ಸೋಮವಾರ, ಮಂಗಳವಾರ ಸಂಚರಿಸುತ್ತಿತ್ತು.
ಮಂಗಳೂರು ಸೆಂಟ್ರಲ್– ಕೆಎಸ್ಆರ್ ಬೆಂಗಳೂರು (ರೈ.ಸಂ 06518) ರೈಲು ಇದೇ 8 ರಿಂದ ಗುರುವಾರ, ಶನಿವಾರ ಹಾಗೂ ಸೋಮವಾರ ಸಂಚರಿಸಲಿದೆ. ಈ ಮೊದಲು ಗುರುವಾರ, ಶುಕ್ರವಾರ ಹಾಗೂ ಶನಿವಾರ ರೈಲು ಸಂಚಾರ ಮಾಡುತ್ತಿತ್ತು.