ಮಂಗಳೂರು: ಪುತ್ತೂರು ತಾಲ್ಲೂಕಿನ ಕಬಕದಲ್ಲಿ ನಾರಾಯಣ ಭಟ್ ಎಂಬುವವರ ಮನೆಯನ್ನು ಜಿಲೆಟಿನ್ ಕಡ್ಡಿಗಳನ್ನು ಬಳಸಿ ಸ್ಫೋಟಿಸಲು ದುಷ್ಕರ್ಮಿಗಳು ಯತ್ನಿಸಿದ್ದು, ಮನೆಯ ಕಿಟಕಿ ಮತ್ತು ಬಾಗಿಲುಗಳು ಛಿದ್ರಗೊಂಡಿವೆ.
ನಸುಕಿನ ಜಾವ 2 ಗಂಟೆ ಸುಮಾರಿಗೆ ಡೀಸೆಲ್ ವಾಸನೆ ಬಂದಿದೆ. ಎಚ್ಚರಗೊಂಡ ನಾರಾಯಣ ಭಟ್ ಮತ್ತು ಪತ್ನಿ ದೇವಕಿ ಎದುರಿನ ಬಾಗಿಲು ತೆರೆಯಲು ಯತ್ನಿಸಿದ್ದಾರೆ. ಆಗ ಮುಂಭಾಗದಿಂದ ಬಾಗಿಲಿನಚಿಲಕ ಹಾಕಲಾಗಿತ್ತು. ಕಿಟಕಿ ತೆರೆದಾಗ ಸ್ಫೋಟ ಸಂಭವಿಸಿದೆ.
ಸ್ಫೋಟದ ರಭಸಕ್ಕೆ ಬಾಗಿಲು ಮತ್ತು ಕಿಟಕಿಗಳು ಛಿದ್ರಗೊಂಡಿವೆ. ಗಾಜು ಮತ್ತು ಮರದ ಚೂರುಗಳು ಅಪ್ಪಳಿಸಿ ದೇವಕಿಯರ ಎರಡೂ ಕಾಲುಗಳಿಗೆ ತೀವ್ರ ಹಾನಿಯಾಗಿದೆ. ಅವರನ್ನು ಮಂಗಳೂರಿನ ಎ.ಜೆ.ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಮನೆಯ ಸುತ್ತಲೂ ಡೀಸೆಲ್ ಸುರಿಯಲಾಗಿತ್ತು. ಪುತ್ತೂರು ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಆರಂಭಿಸಿದ್ದಾರೆ.