ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಚಂದ್ರಕಾಂತಿ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆದ ಕೋವಿಡ್ ಕಾರ್ಯಪಡೆಯ ತುರ್ತು ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಶನಿವಾರ ಮತ್ತು ಭಾನುವಾರ ಸಂಪೂರ್ಣ ಬಂದ್ ಆಗಿರುತ್ತದೆ. ಹಾಲು ಅಂಗಡಿಯನ್ನು ಬೆಳಿಗ್ಗೆ 9 ಗಂಟೆವರೆಗೆ ಮಾತ್ರ ತೆರೆಯಲು ಅವಕಾಶ ನೀಡಲಾಗಿದೆ. ಹಾಲಿನ ನೆಪದಲ್ಲಿ ಬೇಕರಿ ತೆರೆಯಬಾರದು. ಔಷಧ ಅಂಗಡಿ ತೆರೆಯಲು ಅವಕಾಶ ನೀಡಲು ತೀರ್ಮಾನಿಸಲಾಗಿದೆ. ಸುರುಳಿಮೂಲೆ ಭಾಗದಲ್ಲಿ ಹೆಚ್ಚು ಪ್ರಕರಣ ಪತ್ತೆಯಾಗಿದ್ದು, ಒಂದೇ ಮನೆಯಲ್ಲಿ 15 ಮಂದಿಗೆ ಕೋವಿಡ್ ದೃಢಪಟ್ಟಿದೆ. ಸೋಂಕಿತರನ್ನು ಕೋವಿಡ್ ಆರೈಕೆ ಕೇಂದ್ರಕ್ಕೆ ಬರುವಂತೆ ವಿನಂತಿಸಲಾಗುವುದು. ಅವರು ಒಪ್ಪದಿದ್ದರೆ ಕಾಲೊನಿಯನ್ನು ಸೀಲ್ಡೌನ್ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.
ಪೇಟೆಯಲ್ಲಿ ಅನಗತ್ಯವಾಗಿ ಜನರು ತಿರುಗಾಡುವುದನ್ನು ನಿಯಂತ್ರಿಸಲು ಪ್ರತಿದಿನ ನಾಲ್ಕು ರಸ್ತೆಗಳಲ್ಲಿ ಪೊಲೀಸ್ ತಪಾಸಣೆ ನಡೆಸಲಾಗುತ್ತದೆ. ಅನಗತ್ಯವಾಗಿ ತಿರುಗಾಟ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಲಾಯಿತು. ಗುರುವಾರದಿಂದ ಬೊಬ್ಬೆಕೇರಿ, ಮೇಗಿನಪೇಟೆ, ಬಾಕಿಮಾರ್, ನಾಡಕಚೇರಿ ಈ ನಾಲ್ಕು ಸ್ಥಳದಲ್ಲಿ ಪೊಲೀಸರು, ಆರೋಗ್ಯಾಧಿಕಾರಿಗಳು ನಿಲ್ಲಬೇಕು. ಪೇಟೆಗೆ ಬರುವ ವ್ಯಕ್ತಿಗಳು ಕೋವಿಡ್ ನೆಗೆಟಿವ್ ವರದಿ ತೋರಿಸಬೇಕು. ಇಲ್ಲದವರಿಗೆ ಸ್ಥಳದಲ್ಲೇ ಕೋವಿಡ್ ಪರೀಕ್ಷೆ ಮಾಡಬೇಕು ಎಂದು ನಿರ್ಣಯಿಸಲಾಯಿತು.
ಪಟ್ಟಣ ಪಂಚಾಯಿತಿ ಉಪಾಧ್ಯಕ್ಷೆ ಉಷಾ ಕೃಷ್ಣಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ ಕಲ್ಲಕಟ್ಟ, ಸದಸ್ಯರಾದ ಅರುಣ್ ಎಂ ವಿಟ್ಲ, ಹಿರಿಯ ಸದಸ್ಯ ಅಶೋಕ್ ಕುಮಾರ್ ಶೆಟ್ಟಿ, ರಾಮ್ ದಾಸ್ ಶೆಣೈ, ಜಯಂತ ನಾಯ್ಕ, ಹಸೈನಾರ್ ನೆಲ್ಲಿಗುಡ್ಡೆ, ಲೋಕನಾಥ ಶೆಟ್ಟಿ, ದಮಯಂತಿ, ಲತಾ ಅಶೋಕ್, ಅಬೂಬಕ್ಕರ್, ಸುನೀತಾ ಕೋಟ್ಯಾನ್, ಮುಖ್ಯಾಧಿಕಾರಿ ಮಾಲಿನಿ, ಎಎಸೈ ಕರುಣಾಕರ್, ಆರೋಗ್ಯ ಇಲಾಖೆಯ ಕುಸುಮಾ, ಗ್ರಾಮ ಕರಣಿಕ ಪ್ರಕಾಶ್, ಸಿಬ್ಬಂದಿ ಚಂದ್ರಶೇಖರ ವರ್ಮ ಮೊದಲಾದವರು ಇದ್ದರು.