ಮಂಗಳೂರು: ರಾಮಕೃಷ್ಣ ಮಿಷನ್ನ ‘ಸ್ವಚ್ಛ ಮಂಗಳೂರು’ ಅಭಿಯಾನದ ಪ್ರೇರಣೆಯಿಂದ ಆರಂಭಗೊಂಡ ಮಂಗಳಾ ಸಂಪನ್ಮೂಲ ನಿರ್ವಹಣಾ ಸಂಸ್ಥೆಯು ಕೋಡಿಯಾಲ್ ಬೈಲ್ನಲ್ಲಿರುವ ‘ದೀಪಾ ರೆಸಿಡೆನ್ಸಿ’ ಅಪಾರ್ಟ್ಮೆಂಟ್ನ 57 ವಸತಿ ಗೃಹಗಳಲ್ಲಿ ಹಸಿ ಕಸ ನಿರ್ವಹಣೆಯ ಹೊಣೆ ವಹಿಸಿಕೊಂಡಿದೆ. ಬುಧವಾರ ಇದಕ್ಕೆ ಅಧಿಕೃತ ಚಾಲನೆ ನೀಡಲಾಯಿತು.
ಈಗಾಗಲೇ ನಗರದ ಹಲವಾರು ವಸತಿ ಸಮುಚ್ಚಯಗಳಲ್ಲಿ ಮೂರು ಮಣ್ಣಿನ ಮಡಿಕೆಯ ಮೂಲಕ ಯಾವುದೇ ವಿದ್ಯುತ್ ಅಥವಾ ಇತರೇ ಇಂಧನಗಳನ್ನು ಬಳಸದೆ ಕಡಿಮೆ ಖರ್ಚಿನಲ್ಲಿ ನೈಸರ್ಗಿಕವಾಗಿ ಹಸಿ ಕಸವನ್ನು ನಿರ್ವಹಿಸಲಾಗುತ್ತಿದೆ. ಒಂದೂವರೆ ವರ್ಷಗಳಿಂದ 15 ವಸತಿ ಸಮುಚ್ಚಯಗಳ 500ಕ್ಕೂ ಹೆಚ್ಚಿನ ಫ್ಲಾಟ್ಗಳಲ್ಲಿ ಈ ಯೋಜನೆ ಯಶಸ್ವಿಯಾಗಿ ನಡೆಯುತ್ತಿದೆ.
ಮಂಗಳಾ ಸಂಪನ್ಮೂಲ ನಿರ್ವಹಣಾ ಸಂಸ್ಥೆಯ ಆಡಳಿತ ನಿರ್ದೇಶಕ ದಿಲ್ರಾಜ್ ಆಳ್ವ ಮತ್ತು ಅಪಾರ್ಟ್ಮೆಂಟ್ ಮಾಲೀಕರ ಸಂಘದ ಅಧ್ಯಕ್ಷ ಸಿ.ಎ. ಪ್ರವೀಣ್ ಕುಮಾರ್ ಶೆಟ್ಟಿ, ಕಾರ್ಯದರ್ಶಿ ಗೋಪಾಲಕೃಷ್ಣ ಶೆಟ್ಟಿ, ಖಾಜಾಂಜಿ ಶಾಂತಲಕ್ಷ್ಮಿ ಪ್ರಭು ಇದ್ದರು.
ಮಂಗಳಾ ಸಂಪನ್ಮೂಲ ನಿರ್ವಹಣಾ ಸಂಸ್ಥೆಯ ಯೋಜನಾ ಮುಖ್ಯಸ್ಥ ಪುನೀತ್ ಪೂಜಾರಿ ತ್ಯಾಜ್ಯ ನಿರ್ವಹಣೆಯ ಕುರಿತು ಮಾಹಿತಿ ನೀಡಿದರು.