ಮಂಗಳೂರು: ‘ಇಂದಿನ ಕಾಲಘಟ್ಟದಲ್ಲಿ ಸಂವೇದನೆಯನ್ನು ಕಳೆದುಕೊಳ್ಳುತ್ತಿದ್ದೇವೆ. ಮೌಲ್ಯಗಳು ನಶಿಸಿಹೋಗುತ್ತಿವೆ. ಶಿಕ್ಷಣವು ಯಾಂತ್ರಿಕವಾಗಿದೆ’ ಎಂದು ಲೇಖಕ ಡಾ.ನರೇಂದ್ರ ರೈ ದೇರ್ಲ ಕಳವಳ ವ್ಯಕ್ತಪಡಿಸಿದರು.
ಯೆನೆಪೋಯ ಇನ್ಸ್ಟಿಟ್ಯೂಟ್ ಆಫ್ ಆರ್ಟ್ಸ್, ಸೈನ್ಸ್, ಕಾಮರ್ಸ್ ಆ್ಯಂಡ್ ಮ್ಯಾನೇಜ್ಮೆಂಟ್ನ ಸಹಾಯಕ ಪ್ರಾಧ್ಯಾಪಕ ನಿಯಾಝ್ ಪಡೀಲ್ ರಚಿಸಿದ ‘ಯತೀಮ್’ ಕನ್ನಡ ಕಾದಂಬರಿ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಸಹಿಸುವ ಗುಣ ಮರೆಯಾಗಿ ಮನೋಸ್ಥೈರ್ಯ ಕುಸಿಯುತ್ತಿರುವ ಇಂದಿನ ಸನ್ನಿವೇಶದಲ್ಲಿ ನಾವು ಪುಸ್ತಕದ ಪುಟ ತಿರುಗಿಸಿದರೆ ಸಾಲದು. ನಮ್ಮ ಅಂತರಂಗದ ಕಟ್ಟು ಬಿಚ್ಚಿ ಒಳಗಿನ ಕತ್ತಲೆಯನ್ನು ಓಡಿಸಬೇಕು. ಯಾಂತ್ರಿಕತೆಯಿಂದ ಹೊರಬರುವ ಪ್ರಯತ್ನ ಮಾಡಬೇಕು’ ಎಂದರು.
‘ಕೇವಲ ‘ಯತೀಮ್’ (ಅನಾಥ) ಮಕ್ಕಳಲ್ಲಿ ಮಾತ್ರ ಅನಾಥಪ್ರಜ್ಞೆ ಇರುವುದಲ್ಲ. ಅದು ಜಗತ್ತಿನ ಪ್ರತಿಯೊಬ್ಬರನ್ನೂ ಒಂದಿಲ್ಲ ಒಂದು ಹಂತದಲ್ಲಿ ಕಾಡುತ್ತದೆ. ಅದನ್ನು ಮೆಟ್ಟಿನಿಂತು ಮನುಷ್ಯರಾಗಲು ಯತ್ನಿಸಬೇಕು’ ಎಂದರು.
ಬ್ಯಾರಿ ಅಧ್ಯಯನ ಪೀಠದ ಸಂಯೋಜಕ ಡಾ. ಅಬೂಬಕರ್ ಸಿದ್ದೀಕ್ ‘ಯತೀಂ’ ಕಾದಂಬರಿಯನ್ನು ಇಲ್ಲಿ ಬಿಡುಗಡೆಗೊಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಉಪಪ್ರಾಂಶುಪಾಲ ಡಾ. ಜೀವನ್ರಾಜ್ ಕುತ್ತಾರ್ ಮಾತನಾಡಿದರು. ಉಪಪ್ರಾಂಶುಪಾಲ ನಾರಾಯಣ ಸುಕುಮಾರ ಇದ್ದರು. ಕೃತಿಯ ಲೇಖಕ ನಿಯಾಝ್ ಪಡೀಲ್ ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕಿ ಚೈತ್ರಾ ವಂದಿಸಿದರು. ಸಹ ಪ್ರಾಧ್ಯಾಪಕ ಡಾ. ದಿನಕರ್ ಪಚ್ಚನಾಡಿ ನಿರೂಪಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.