ಬುಧವಾರ, ಮಾರ್ಚ್ 22, 2023
19 °C

ಕಾರ್ಗಿಲ್‌ ಸಂಸ್ಥೆಯಿಂದ 3 ಆಂಬುಲೆನ್ಸ್ ಕೊಡುಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಕಾರ್ಗಿಲ್ ಕಂಪನಿಯವರು ಜಿಲ್ಲಾಡಳಿತಕ್ಕೆ ನೀಡಿರುವ ₹33 ಲಕ್ಷದ ಅತ್ಯಾಧುನಿಕ ಆಂಬುಲೆನ್ಸ್ ಅನ್ನು ಜಿಲ್ಲಾಡಳಿತ ಭವನದ ಆವರಣದಲ್ಲಿ ಸಂಸದ ಜಿ.ಎಂ.ಸಿದ್ದೇಶ್ವರ ಅವರು ಶುಕ್ರವಾರ, ಜಗಳೂರು ತಾಲ್ಲೂಕು ಆಸ್ಪತ್ರೆಗೆ ಹಸ್ತಾಂತರಿಸಿದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, ‘ಕಾರ್ಗಿಲ್ ಕಂಪನಿಯವರು 3 ಹೈಟೆಕ್ ಆಂಬುಲೆನ್ಸ್‌ಗಳನ್ನು ಜಿಲ್ಲಾಡಳಿತಕ್ಕೆ ನೀಡಿದ್ದು, ಅವುಗಳನ್ನು ಹರಿಹರ, ದಾವಣಗೆರೆ, ಜಗಳೂರು ತಾಲ್ಲೂಕುಗಳಿಗೆ ನೀಡಲಾಗಿದೆ. ಇನ್ನೂ 3 ಆಂಬುಲೆನ್ಸ್ ನೀಡುವಂತೆ ಕಾರ್ಗಿಲ್ ಕಂಪನಿಯವರನ್ನು ಕೇಳಿದ್ದು, ಅವುಗಳನ್ನು ಇತರ ತಾಲ್ಲೂಕುಗಳಿಗೆ ನೀಡುವ ಉದ್ದೇಶವಿದೆ’ ಎಂದರು.

‘ಸಂಭಾವ್ಯ 3ನೇ ಅಲೆ ಎದುರಿಸುವ ನಿಟ್ಟಿನಲ್ಲಿ ವೆಂಟಿಲೇಟರ್, ಪೌಷ್ಟಿಕ ಆಹಾರ ಒದಗಿಸುವಂತೆ ಗ್ರಾಸಿಂ ಇಂಡಸ್ಟ್ರೀಸ್‌ನವರನ್ನು ಕೇಳಿದ್ದೇವೆ.
ಕೇಂದ್ರ ಸರ್ಕಾರದ ಪಿಎಂ ಕೇರ್‌ನಿಂದ 1 ಸಾವಿರ ಲೀಟರ್ ಸಾಮರ್ಥ್ಯದ ಆಕ್ಸಿಜನ್ ಜನರೇಟರ್ ಮಂಜೂರಾಗಿದೆ. ಡಿಆರ್‌ಡಿಒದವರು 2 ಸಾವಿರ ಲೀಟರ್ ಸಾಮರ್ಥ್ಯದ ಆಕ್ಸಿಜನ್ ಜನರೇಟರ್ ಅನ್ನು ನೀಡುತ್ತಿದ್ದು, ಇನ್ನೊಂದು ತಿಂಗಳಲ್ಲಿ ಬರಲಿದೆ. ಇಎಸ್‌ಐ ಆಸ್ಪತ್ರೆಗೆ 500 ಲೀಟರ್ ಸಾಮರ್ಥ್ಯದ ಘಟಕವನ್ನು ನೀಡಲು ಕೇಳಿದ್ದೇವೆ’ ಎಂದು ತಿಳಿಸಿದರು.

ಜುಲೈ 9ರಂದು ಆರೋಗ್ಯ ಸಚಿವ ಡಾ. ಸುಧಾಕರ್ ಜಿಲ್ಲೆಗೆ ಭೇಟಿ ನೀಡಲಿದ್ದಾರೆ. ಜಿಲ್ಲಾಸ್ಪತ್ರೆ ಕಟ್ಟಡ ಶಿಥಿವಾಗಿದ್ದು, ಅದನ್ನು ನವೀಕರಣ ಮಾಡುವ ನಿಟ್ಟಿನಲ್ಲಿ ತಪಾಸಣೆ ಕೈಗೊಳ್ಳಲಿದ್ದಾರೆ ಎಂದು ಹೇಳಿದರು.

ಜಗಳೂರು ಶಾಸಕ ಎಸ್.ವಿ. ರಾಮಚಂದ್ರ ಮಾತನಾಡಿ, ಜಗಳೂರು ಆಸ್ಪತ್ರೆಗೆ ಆಂಬುಲೆನ್ಸ್ ದೊರೆತಿದ್ದು ಸುಸಜ್ಜಿತವಾಗಿದೆ. ತಾಲೂಕಿನಲ್ಲಿ ಕರೊನಾ ಪ್ರಕರಣಗಳು ಮೊದಲಿನಿಂದಲೂ ನಿಯಂತ್ರಣದಲ್ಲಿವೆ. ಸಾವಿನ ಪ್ರಕರಣಗಳೂ ಕಡಿಮೆ ಇವೆ. ಸೋಂಕಿತರಿಗೆ ಎಲ್ಲ ಸೌಲಭ್ಯಗಳನ್ನೂ ನೀಡಿದ್ದೇವೆ’ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ ಡಿಎಚ್‌ಒ ಡಾ. ನಾಗರಾಜ್ ಇದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.