ದಾವಣಗೆರೆ: ‘ತಾಲೂಕಿನ ಕೊಗ್ಗನೂರು ಸಮೀಪದ 12 ಎಕರೆ ಜಾಗದಲ್ಲಿ ಅಂಗವಿಕಲರ ಸಂಯುಕ್ತ ಪ್ರಾದೇಶಿಕ ಕೇಂದ್ರದ ಸ್ವಂತ ಕಟ್ಟಡ ಸ್ಥಾಪಿಸಲು ಉದ್ದೇಶಿಸಿದ್ದು, ಮೂರು ತಿಂಗಳಲ್ಲಿ ಕೇಂದ್ರದಿಂದ ಮಂಜೂರಾತಿ ಸಿಗಲಿದೆ’ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ವಿಶ್ವಾಸ ವ್ಯಕ್ತಪಡಿಸಿದರು.
ಇಲ್ಲಿನ ಅಂಗವಿಕಲರ ಕೌಶಲಾಭಿವೃದ್ಧಿ, ಪುನರ್ವಸತಿ ಮತ್ತು ಸಬಲೀಕರಣದ ಸಂಯುಕ್ತ ಪ್ರಾದೇಶಿಕ ಕೇಂದ್ರದಲ್ಲಿ ನಡೆದ ಅಡಿಪ್ ಯೋಜನೆಯಡಿ ಅಂಗವಿಕಲರಿಗೆ ಟಿಎಲ್ಎಂ ಕಿಟ್ ವಿತರಿಸಿ ಅವರು ಮಾತನಾಡಿ, ‘ಶೀಘ್ರ ಕಟ್ಟಡ ನಿರ್ಮಾಣ ಪೂರ್ಣಗೊಳಿಸಿ ಅಂಗವಿಕಲ ಮಕ್ಕಳಿಗೆ ವಸತಿ, ತರಬೇತಿ ಹಾಗೂ ಉದ್ಯೋಗ ಒದಗಿಸಲಾಗುವುದು’ ಎಂದು ಹೇಳಿದರು.
‘₹ 36 ಕೋಟಿ ವೆಚ್ಚದಲ್ಲಿ ಈ ಕೇಂದ್ರ ಸ್ಥಾಪಿಸಲು ಉದ್ದೇಶಿಸಿದ್ದು,ಗೋವಾ ಮತ್ತು ಕರ್ನಾಟಕದಲ್ಲಿನ ಅಂಗವಿಕಲ ಮಕ್ಕಳಿಗೆ ಶಿಕ್ಷಣ, ತರಬೇತಿ, ಹಾಸ್ಟೆಲ್ ಸೌಲಭ್ಯ ಸಿಗಲಿದೆ. ತರಬೇತಿ ನಂತರ ಉದ್ಯೋಗಾವಕಾಶವೂ ಸಿಗಲಿದೆ. ಸದ್ಯಕ್ಕೆ 50ರಿಂದ 60 ಅಂಗವಿಕಲರಿಗೆ ಇಲ್ಲಿ ಸೌಲಭ್ಯ, ಚಿಕಿತ್ಸೆ ಸಿಗುತ್ತಿದೆ. ಶಾಶ್ವತ ಕಟ್ಟಡವಾದಲ್ಲಿ 300ರಿಂದ 400 ಜನ ಮಕ್ಕಳಿಗೆ ಅನುಕೂಲತೆ ಲಭಿಸಲಿದೆ ’ ಎಂದು ಹೇಳಿದರು.
ತಲಾ ₹ 7 ಸಾವಿರ ಮೌಲ್ಯದ ವ್ಹೀಲ್ಚೇರ್ಗಳು, ತಲಾ ₹ 10 ಸಾವಿರ ಮೊತ್ತದ ಕೌಶಲ ಸಾಮಗ್ರಿಗಳನ್ನು ಒಳಗೊಂಡ ಕಿಟ್ಗಳು, ಅಲ್ಪಕಾಲಿಕ ತರಬೇತಿ ಪಡೆದ ಗೃಹಾಧಾರಿತ ಮಕ್ಕಳ ಪಾಲಕರಿಗೆ ಪ್ರಮಾಣಪತ್ರಗಳನ್ನು ನೀಡಲಾಯಿತು.
ಧೂಡಾ ಅಧ್ಯಕ್ಷ ದೇವರಮನೆ ಶಿವಕುಮಾರ್, ಸದಸ್ಯರಾದ ಕೆ. ಲಕ್ಷ್ಮಣ್, ಗೌರಮ್ಮ ಪಾಟೀಲ್, ಮಾರುತಿರಾವ್ ಘಾಟ್ಗೆ, ಸಿಆರ್ಸಿ ಕೇಂದ್ರದ ಪ್ರಭಾರ ನಿರ್ದೇಶಕ ಥಾಮರಾಯ್ ಸೆಲ್ವನ್, ಕ್ಲಿನಿಕಲ್ ಸೈಕಾಲಜಿಸ್ಟ್ ಷರೀಫ್ ಯಾಸಿನ್, ರಾಜು ಸಲಕೋಟೆ, ಡಾ. ರಂಜಿತ್ಕುಮಾರ್, ಡಾ. ವಿಜಯರಾಜ್, ಸುರೇಶ್ವರ್ ಕೇಸರಿ ಇದ್ದರು.