ದಾವಣಗೆರೆ: ಜಿಲ್ಲೆಯಲ್ಲಿ ಕೊರೊನಾ ಸೋಂಕಿನಿಂದ ಒಬ್ಬರು ಮೃತಪಟ್ಟಿದ್ದು, 484 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.267 ಜನರಲ್ಲಿ ಜಿಲ್ಲೆಯಲ್ಲಿ ಕೋವಿಡ್–19 ದೃಢಪಟ್ಟಿದೆ.
ಕೊರೊನಾ ಜೊತೆಗೆ ನ್ಯುಮೊನಿಯಾದಿಂದ ಬಳಲುತ್ತಿದ್ದ ಹರಿಹರ ಸಮೀಪದ ಕುಮಾರಪಟ್ಟಣಂ ನಿವಾಸಿ 65 ವರ್ಷದ ವೃದ್ಧ ಮೃತಪಟ್ಟವರು.
ಮೂವರು ಪೊಲೀಸರಿಗೆ, ಮೂವರು ಹೆಲ್ತ್ ವರ್ಕರ್, ಒಬ್ಬರು ಚಿಗಟೇರಿ ಆಸ್ಪತ್ರೆಯ ಸಿಬ್ಬಂದಿ, ಖಾಸಗಿ ಆಸ್ಪತ್ರೆಯ ಇಬ್ಬರು ಸಿಬ್ಬಂದಿಗೆ ಸೋಂಕು ದೃಢಪಟ್ಟಿದ್ದು, ಸೋಂಕಿಗೆ ಒಳಗಾದ ಹೆಚ್ಚಿನ ಮಂದಿಗೆ ರೋಗ ಲಕ್ಷಣಗಳು ಇಲ್ಲ. ಒಂದು ವರ್ಷದ ಹೆಣ್ಣು ಮಗು, ಮೂರು ಬಾಲಕಿಯರು, ಇಬ್ಬರು ಬಾಲಕರಿಗೆ ಸೋಂಕು ತಗುಲಿದೆ.
ಜಿಲ್ಲೆಯಲ್ಲಿ ಈವರೆಗೆ ಕೊರೊನಾಕ್ಕೆ 225 ಮಂದಿ ಮೃತಪಟ್ಟಿದ್ದಾರೆ. ದಾವಣಗೆರೆ ಸಮೀಪದ ಆವರಗೆರೆ ಮುಖ್ಯ ರಸ್ತೆಯ 35 ವರ್ಷದ ವ್ಯಕ್ತಿ, 68 ವರ್ಷದ ವೃದ್ಧೆಗೆ ತೀವ್ರ ಉಸಿರಾಟದ ಸಮಸ್ಯೆಯಿಂದ ಸೋಂಕು ಕಾಣಿಸಿಕೊಂಡಿದೆ. ಜಯನಗರ, ಎಂಸಿಸಿ ಎ ಬ್ಲಾಕ್, ವಿದ್ಯಾನಗರ,ಸರಸ್ವತಿ ಬಡಾವಣೆಭಾರತ್ ಕಾಲೊನಿಗಳಲ್ಲಿ ಸೋಂಕು ತಗುಲಿದೆ.
ದಾವಣಗೆರೆ ನಗರ ಮತ್ತು ತಾಲ್ಲೂಕಿನ 100, ಹರಿಹರ ತಾಲ್ಲೂಕಿನ46, ಜಗಳೂರಿನ26, ಚನ್ನಗಿರಿಯ 31, ಹೊನ್ನಾಳಿಯ 50 ಹಾಗೂ ಹೊರ ಜಿಲ್ಲೆಯ 14 ಮಂದಿಗೆ ಸೋಂಕು ತಗುಲಿದೆ.
ದಾವಣಗೆರೆ ನಗರ ಮತ್ತು ತಾಲೂಕಿನ ವಿವಿಧ ಭಾಗದ 240, ಹರಿಹರದ 71, ಜಗಳೂರಿನ 19, ಚನ್ನಗಿರಿಯ 46, ಹೊನ್ನಾಳಿಯ 83 ಹೊರ ಜಿಲ್ಲೆಯ 25 ಜನರು ಸೇರಿ 484 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ.
ಜಿಲ್ಲೆಯಲ್ಲಿ 12,783 ಪ್ರಕರಣಗಳಲ್ಲಿ ಈವರೆಗೆ 9,971 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಗುಣಮುಖರಾದವರ ಸಂಖ್ಯೆ ಹತ್ತು ಸಾವಿರದ ಗಡಿ ಸಮೀಪಿಸಿದೆ. 2,557 ಸಕ್ರಿಯ ಪ್ರಕರಣಗಳಿವೆ.