ಬಸವಾಪಟ್ಟಣ: ಸಮೀಪದ ಚಿರಡೋಣಿಯ ರೈತ ಹನುಮಂತಪ್ಪ (98) ಮತ್ತು ಅವರ ಪತ್ನಿ ಜಯಮ್ಮ (82) ಅವರು ಭಾನುವಾರ ಕೇವಲ ಒಂದೂವರೆ ಗಂಟೆಯ ಅವಧಿಯಲ್ಲಿ ನಿಧನರಾಗಿದ್ದು, ವೃದ್ಧ ದಂಪತಿ ಸಾವಿನಲ್ಲೂ ಒಂದಾಗಿದ್ದಾರೆ.
ಬೆಳಿಗ್ಗೆ 8.30ರಲ್ಲಿ ಜಯಮ್ಮ ವಯೋಸಹಜವಾಗಿ ನಿಧನರಾದರು. ಪತ್ನಿಯ ಅಗಲಿಕೆಯನ್ನು ಸಹಿಸಲಾರದೇ ಬೆಳಿಗ್ಗೆ 10ಕ್ಕೆ ಹನುಮಂತಪ್ಪ ಹೃದಯಾಘಾತದಿಂದ ನಿಧನರಾದರು.
‘ಈ ದಂಪತಿ ಸ್ವಭಾವತಃ ಉತ್ತಮ ಗುಣ ಮತ್ತು ನಡತೆಯನ್ನು ಹೊಂದಿದ್ದು, ಅಧ್ಯಾತ್ಮಿಗಳಾಗಿದ್ದರು’ ಎಂದು ಗ್ರಾಮಸ್ಥರು ತಿಳಿಸಿದರು.ದಂಪತಿಗೆ ನಾಲ್ವರು ಪುತ್ರಿಯರು, ಒಬ್ಬ ಪುತ್ರ ಇದ್ದಾರೆ. ದಂಪತಿಯ ಅಂತ್ಯಕ್ರಿಯೆ ಭಾನುವಾರ ನಡೆಯಿತು.