‘ಈ ಬಾರಿ ಉತ್ತಮ ಮಳೆ ಆಗುತ್ತದೆ ಎಂದು ಹವಾಮಾನ ಇಲಾಖೆಯವರು ಹೇಳಿದ್ದರು. ಆದರೆ ಮಳೆಯೇ ಇಲ್ಲ. ಆರಂಭದಲ್ಲೇ ಬರೆ ಎಳೆದಂತಾಗಿದೆ. 5 ಎಕರೆಯಲ್ಲಿ ಮೆಕ್ಕೆಜೋಳ ಬಿತ್ತನೆ ಮಾಡಿದ್ದೇವೆ. ಈ ಭಾಗದಲ್ಲಿ ಮೆಕ್ಕೆಜೋಳ ಪ್ರಮುಖ ಬೆಳೆ. ಮಳೆ ಅಗತ್ಯವಾಗಿ ಬೇಕು. ಆಕಾಶದತ್ತ ನೋಡುವುದೇ ರೈತರ ಕಾಯಕವಾಗಿದೆ’ ಎಂದು ಜಗಳೂರು ಕಸಬಾ ಹೋಬಳಿ ಪಿ. ತಿಪ್ಪೇಸ್ವಾಮಿ ವಾಸ್ತವ ತೆರೆದಿಟ್ಟರು. ‘ಬಿತ್ತನೆ ಬೀಜ ರಸಗೊಬ್ಬರದ ಬೆಲೆಯೂ ಏರಿಕೆಯಾಗಿದ್ದು ಸಂಕಷ್ಟ ಅನುಭವಿಸುವಂತಾಗಿದೆ. ಮೆಕ್ಕೆಜೋಳ ಕೈಗೆ ಬರದಿದ್ದರೆ ಮುಂದೆ ಏನು ಎಂಬ ಚಿಂತೆ ಕಾಡುತ್ತಿದೆ. ಕೊಳವೆಬಾವಿಯಲ್ಲೂ ನೀರು ಇಲ್ಲ. ಮೊದಲು ನ್ಯಾಮತಿ ಭಾಗದಲ್ಲಿ ತರಕಾರಿ ಬೆಳೆಯುತ್ತಿದ್ದರು. ನೀರಿನ ಕೊರತೆಯ ಕಾರಣ ರೈತರು ವಿಮುಖರಾಗುತ್ತಿದ್ದಾರೆ’ ಎಂದು ನ್ಯಾಮತಿಯ ರೈತ ಸಂತೋಷ್ಕುಮಾರ್ ಹೇಳಿದರು. ಜಲಮೂಲಗಳಿಗಿಲ್ಲ ಜೀವಕಳೆ ಜೂನ್ ತಿಂಗಳಲ್ಲಿ ವಾಡಿಕೆ ಆಗಬೇಕಿದ್ದ ಮಳೆ ಒಂದೆರಡು ದಿನಗಳಲ್ಲಿ ಸುರಿದಿದೆ. ಆದರೆ ಮತ್ತೆ ಮಳೆಯೇ ಆಗಿಲ್ಲ. ಇದರಿಂದ ಕೃಷಿ ಚಟುವಟಿಕೆಗೆ ಹಿನ್ನಡೆಯಾಗಿದೆ. ಮಳೆಯಾಗದ ಕಾರಣ ಕೆರೆಕಟ್ಟೆಗಳು ಈ ಭಾಗದ ರೈತರ ಜೀವನಾಡಿ ಭದ್ರಾ ಜಲಾಶಯ ತುಂಬಿಲ್ಲ. ಅಂತರ್ಜಲ ಮಟ್ಟವೂ ಏರಿಕೆಯಾಗದ ಕಾರಣ ಬೇಸಿಗೆಯಲ್ಲಿ ಬತ್ತಿದ್ದ ಕೊಳವೆಬಾವಿಗಳಲ್ಲಿ ನೀರು ಬಂದಿಲ್ಲ. ನೀರಿನ ಮೂಲಗಳೂ ಜೀವಕಳೆ ಪಡೆದಿಲ್ಲ. ಇದರಿಂದ ರೈತರು ಜಾನುವಾರುಗಳು ಸಂಕಷ್ಟ ಎದುರಿಸುವಂತಾಗಿದೆ.