ನ್ಯಾಮತಿ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿಗಳು 18ರಿಂದ 20 ಸ್ಥಾನಗಳಲ್ಲಿ ಜಯಗಳಿಸಲಿದ್ದಾರೆ ಎಂದು ಸಂಸದ ಡಿ.ಕೆ. ಸುರೇಶ ವಿಶ್ವಾಸ ವ್ಯಕ್ತಪಡಿಸಿದರು.
ತಾಲ್ಲೂಕಿನ ಬಂಜಾರ ಸಮಾಜದ ಗುರು ಸಂತ ಸೇವಾಲಾಲ್ ಅವರ ಜನ್ಮಸ್ಥಾನ ಸೂರಗೊಂಡನಕೊಪ್ಪಕ್ಕೆ ಭಾನುವಾರ ಭೇಟಿ ನೀಡಿ ಸೇವಾಲಾಲ್ ಮತ್ತು ಮರಿಯಮ್ಮ ದೇವಿ ದರ್ಶನ ಪಡೆದರು.
‘ಕಾಂಗ್ರೆಸ್ ಹೈಕಮಾಂಡ್ ಸೂಚನೆ ಮೇರೆಗೆ ಡಿಕೆಶಿ ಸಹೋದರರು ಕಾರ್ಯನಿರ್ವಹಿತ್ತೇವೆ, ಇದನ್ನೇ ತಪ್ಪಾಗಿ ಅರ್ಥೈಸಿದರೆ ಏನೂ ಮಾಡಲು ಸಾಧ್ಯವಿಲ್ಲ. ಸದ್ಯಕ್ಕೆ ರಾಜ್ಯದಲ್ಲಿ ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ, ಸಿಎಂ ಹುದ್ದೆಯ ಮೇಲೆ ಡಿ.ಕೆ. ಶಿವಕುಮಾರ ಅವರಿಗೆ ಆಸೆ ಇಲ್ಲ. ಕಾಂಗ್ರೆಸ್ನಲ್ಲಿ ಪ್ರಾಮಾಣಿಕ ಸೇವೆ ಸಲ್ಲಿಸಿದವರಿಗೆ ಸೂಕ್ತ ಸ್ಥಾನಮಾನ ಸಿಕ್ಕೆ ಸಿಗುತ್ತದೆ’ ಎಂದರು.
ಕಾಂಗ್ರೆಸ್ ಅಧಿಕಾರದಲ್ಲೂ ಪಾಕಿಸ್ಥಾನದ ವಿರುದ್ಧ ಸರ್ಜಿಕಲ್ ಸ್ಟ್ರೈಕ್ ನಡೆದಿತ್ತು. ಸರ್ಜಿಕಲ್ ಸ್ಟ್ರೈಕ್ ಮಾಡಿದ್ದು ಸೈನಿಕರು ನಾವಲ್ಲ. ಅದನ್ನು ರಾಜಕಾರಣಕ್ಕೆ ಬಳಸಿಕೊಳ್ಳುವುದಿಲ್ಲ. ಆದರೆ ಪ್ರಧಾನಿ ನರೇಂದ್ರ ಮೋದಿ ಸರ್ಜಿಕಲ್ ದಾಳಿಯನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದಾರೆ ಅದು ಸರಿಯಲ್ಲ’ ಎಂದರು.
ಮೈತ್ರಿ ಅಭ್ಯರ್ಥಿಗಳ ಬಗ್ಗೆ ಕೆಲ ಭಾಗದಲ್ಲಿ ಸ್ವಲ್ಪ ಮಟ್ಟಿಗೆ ಕಸಿವಿಸಿಯಾಗಿರುವುದು ಸತ್ಯ. ಆದರೆ ಅಂತಹ ಕ್ಷೇತ್ರಗಳಲ್ಲಿ ಮುಖಂಡರ ಜೊತೆ ಚರ್ಚಿಸಿ ಚುನಾವಣೆಗೆ ಕೆಲಸ ಮಾಡುವಂತೆ ಮನವೊಲಿಸಲಾಗಿದೆ. ರಾಮನಗರದಲ್ಲೂ ಮೈತ್ರಿ ಪಕ್ಷದ ಮುಖಂಡರೆಲ್ಲರು ಸಹ ನಮ್ಮ ಪರವಾಗಿ ಕೆಲಸ ಮಾಡಿದ್ದಾರೆ. ಎಲ್ಲೂ ಅಸಮಾಧಾನ ಇಲ್ಲ ಎಂದರು.
ಮಂಡ್ಯದಲ್ಲಿ ಮೈತ್ರಿ ಅಭ್ಯರ್ಥಿ ನಿಖಿಲ್ಕುಮಾರ್ ಜಯಬೇರಿ ಬಾರಿಸುವ ವಿಶ್ವಾಸ ಇದೆ. ವಿರೋಧ ಪಕ್ಷಗಳು ಹೇಳುವಂತೆ ಮೇ 23ರ ಫಲಿತಾಂಶ ನಂತರ ಏನು ಆಗುವುದಿಲ್ಲ. ಸಮ್ಮಿಶ್ರ ಸರ್ಕಾರ ಸ್ಥಿರವಾಗಿರುತ್ತದೆ ಎಂದರು.
ಸಂತ ಸೇವಾಲಾಲ್ ಜನ್ಮಸ್ಥಾನ ಮಹಾಮಠ ಸಮಿತಿಯ ಬಿ. ಹೀರ್ಯಾನಾಯ್ಕ, ಡಾ. ಈಶ್ವರನಾಯ್ಕ, ಮಹಾದೇವನಾಯ್ಕ, ದೂದ್ಯಾನಾಯ್ಕ, ಜಿ. ಶಿವರಾಂನಾಯ್ಕ, ಪೀರ್ಯಾನಾಯ್ಕ, ರಾಘವೇಂದ್ರನಾಯ್ಕ, ಓಂಕಾರನಾಯ್ಕ ಹಾಗೂ ನ್ಯಾಮತಿ ತಾಲ್ಲೂಕಿನ ಕಾಂಗ್ರೆಸ್ ಮುಖಂಡರು ಕಾರ್ಯಕರ್ತರು ಇದ್ದರು.