ದಾವಣಗೆರೆ:ಜಯಣ್ಣ ಅವರ ಹೋರಾಟದ ಫಲವಾಗಿ ಭದ್ರಾ ಮೇಲ್ದಂಡೆ ಯೋಜನೆ ಸಾಕಾರಗೊಂಡಿದೆ. ಇದೀಗ ರಾಷ್ಟ್ರೀಯ ಯೋಜನೆಯಾಗಿ ಮಾರ್ಪಾಡಾಗುತ್ತಿದ್ದು, ಕೇಂದ್ರ ಸರ್ಕಾರದಿಂದ ₹ 16 ಸಾವಿರ ಕೋಟಿ ಬಿಡುಗಡೆಯಾಗಲಿದೆ. ಇದನ್ನು ಕಣ್ತುಂಬಿಕೊಳ್ಳಲು ಜಯಣ್ಣ ಇನ್ನಷ್ಟು ವರ್ಷ ಬದುಕಿರಬೇಕಿತ್ತುಸಂಸದ ಜಿ.ಎಂ. ಸಿದ್ದೇಶ್ವರ ಹೇಳಿದರು.
ಜಿಲ್ಲಾ ಮಾದಿಗ ನೌಕರರ ಬಳಗದಿಂದ ನಗರದ ಕುವೆಂಪು ಕನ್ನಡ ಭವನದಲ್ಲಿ ಶನಿವಾರ ಆಯೋಜಿಸಿದ್ದ ಜನಪರ ದಲಿತ ಹೋರಾಟಗಾರ ದಿ.ಎಂ. ಜಯಣ್ಣನವರ ಒಂದು ನೆನಪು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಭದ್ರಾ ಮೇಲ್ದಂಡೆ ಯೋಜನೆಯಲ್ಲದೇ ತುಮಕೂರು, ಚಿತ್ರದುರ್ಗ ಹಾಗೂ ದಾವಣಗೆರೆ ನೇರ ರೈಲುಮಾರ್ಗದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದರು. ಈ ಯೋಜನೆಗಳು ಶೀಘ್ರ ಕಾರ್ಯಗತ ಗೊಳ್ಳಲಿದ್ದು, ಈ ಯೋಜನೆಯ ಫಲ ಉಣ್ಣುವ ಮೊದಲೇ ನಿಧನರಾಗಿದ್ದು, ನೋವಿನ ಸಂಗತಿ. ಅವರನ್ನು ದಾವಣಗೆರೆ, ಚಿತ್ರದುರ್ಗ ಮಾತ್ರವಲ್ಲದೆ ತುಮಕೂರು ಜಿಲ್ಲೆಯವರೂ ಸ್ಮರಿಸಬೇಕು’ ಎಂದು ಹೇಳಿದರು.
‘ಭದ್ರಾ ಮೇಲ್ದಂಡೆ ಯೋಜನೆಯಡಿ ನಿಯಮದಂತೆ ಭದ್ರಾ ಮತ್ತು ತುಂಗಾದ ಹೆಚ್ಚುವರಿ ನೀರು ಎತ್ತುವಳಿ ಮಾಡಿ ನೀಡಬಹುದು. ಭದ್ರಾ ನೀರು ಜಿಲ್ಲೆಯ ಜನರ ಜೀವನಾಡಿ. ಯಾವುದೇ ಕಾರಣಕ್ಕೂ ಭದ್ರೆ ಅಭದ್ರವಾಗಲು ಬಿಡುವುದಿಲ್ಲ. ಜಿಲ್ಲೆಯ ಅಚ್ಚುಕಟ್ಟು ರೈತರಿಗೆ ತೊಂದರೆಯಾಗಲು ಬಿಡುವುದಿಲ್ಲ’ ಎಂದು ಅಭಯ ನೀಡಿದರು.
ಉಬ್ರಾಣಿ, ರಾಜನಹಳ್ಳಿ ಏತ ನೀರಾವರಿ, ಹರಪನಹಳ್ಳಿಯ 60 ಕೆರೆ ಭರ್ತಿ ಮಾಡುವುದು ಸೇರಿ ಇನ್ನು ಮೂರ್ನಾಲ್ಕು ವರ್ಷದಲ್ಲಿ ದಾವಣಗೆರೆಯನ್ನು ನೀರಾವರಿ ಜಿಲ್ಲೆಯಾಗಿಸುವ ಆಶಯ ತಮ್ಮದಾಗಿದೆ ಎಂದು ಹೇಳಿಕೊಂಡರು.
ಚಿತ್ರದುರ್ಗ ಸಂಸದ ಎ. ನಾರಾಯಣಸ್ವಾಮಿ ಮಾತ ನಾಡಿ,‘ಇಂದು ರಾಜಕೀಯ ಪಕ್ಷಗಳು ದಲಿತರನ್ನು ಓಲೈಸಲು ಅಂಬೇಡ್ಕರ್ ಅವರನ್ನು ಪಲ್ಲಕ್ಕಿಯ ಮೇಲೆ ಕುಳ್ಳಿರಿಸಿ ಮೆರವಣಿಗೆ ಮಾಡುತ್ತಿವೆ. ಯಾರೊಬ್ಬರಿಗೂ ನಿವೇಶನ ನೀಡಲಿಲ್ಲ. ಈ ಮುಗ್ಧ ಸಮಾಜಕ್ಕೆ ಸರ್ಕಾರದ ಯೋಜನೆಗಳನ್ನು ತಲಪಿಸುವ ಯೋಗ್ಯತೆ, ರಾಜಕಾರಣಿಗಳು ಹಾಗೂ ಸಂಘಟನೆಗಳಿಗೆ ಇಲ್ಲ’ ಎಂದರು.
ಮಾಜಿ ಸಚಿವ ಎಚ್.ಆಂಜನೇಯ ಮಾತನಾಡಿ, ‘ಎಲ್ಲ ವರ್ಗದ ಪರವಾಗಿ ಜಯಣ್ಣ ಹೋರಾಟ ಮಾಡಿದ್ದಾರೆ. ಸಾವಿನ ನಂತರವೂ ಅವರು ಬದುಕಿದ್ದಾರೆ. ರಾಜಕೀಯಕ್ಕೆ ಬಂದರೂ ವೈಯಕ್ತಿಕ ಲಾಭ ಮಾಡಿಕೊಳ್ಳಲಿಲ್ಲ. ಅವರ ಹೆಸರಲ್ಲಿ ಮೆಮೊರಿಯಲ್ ಟ್ರಸ್ಟ್ ರಚಿಸಲಾಗಿದೆ. 2 ಎಕರೆಯಲ್ಲಿ ಸಮಾಧಿ ಅಭಿವೃದ್ಧಿಪಡಿಸಲಾಗುತ್ತಿದೆ’ ಎಂದರು.
ಕಾರ್ಯಕ್ರಮದಲ್ಲಿ ಶಾಸಕ ಪ್ರೊ.ಎಂ.ಲಿಂಗಣ್ಣ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಮಮತಾ ಮಲ್ಲೇಶಪ್ಪ, ಸದಸ್ಯ ಆಲೂರು ನಿಂಗರಾಜ್, ಎಂ. ಪ್ರಸನ್ನಕುಮಾರ್, ಕುಕ್ಕುವಾಡ ಮಲ್ಲೇಶಿ, ಮಾದಿಗ ನೌಕರರ ಬಳಗದ ಅಧ್ಯಕ್ಷ ಪಿ. ನಾಗರಾಜಪ್ಪ ಇದ್ದರು.