ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: 19ಕ್ಕೆ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ

18ಕ್ಕೆ ಬಿಜೆಪಿ ರಾಜ್ಯ ಪದಾಧಿಕಾರಿಗಳ ಸಭೆ * ಎರಡೂ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿರುವ ಮುಖ್ಯಮಂತ್ರಿ
Last Updated 15 ಸೆಪ್ಟೆಂಬರ್ 2021, 4:52 IST
ಅಕ್ಷರ ಗಾತ್ರ

ದಾವಣಗೆರೆ: ಬಿಜೆಪಿ ರಾಜ್ಯ ಪದಾಧಿಕಾರಿಗಳ ಸಭೆ ಮತ್ತು ಬಿಜೆಪಿ ರಾಜ್ಯ ಕಾರ್ಯಕಾರಣಿಯು ಸೆ. 18 ಮತ್ತು 19ರಲ್ಲಿ ನಗರದಲ್ಲಿ ನಡೆಯಲಿದ್ದು, ಗಣ್ಯರ ದಂಡು ಭಾಗವಹಿಸಲಿದೆ.

ಸೆ.18ರಂದು ಸಂಜೆ ಅಪೂರ್ವ ರೆಸಾರ್ಟ್‌ನಲ್ಲಿ ಪದಾಧಿಕಾರಿಗಳ ಸಭೆಯಲ್ಲಿ ರಾಜ್ಯದ ಪದಾಧಿಕಾರಿಗಳು ಭಾಗವಹಿಸುತ್ತಾರೆ. ಸೆ.19ರಂದು ತ್ರಿಶೂಲ್‌ ಕಲಾ ಭವನದಲ್ಲಿ ದಿನಪೂರ್ತಿ ರಾಜ್ಯ ಕಾರ್ಯಕಾರಿಣಿ ನಡೆಯಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್ ಪಕ್ಷದ ಧ್ವಜಾರೋಹಣ ಮಾಡುವ ಮೂಲಕ ಕಾರ್ಯಕಾರಿಣಿಗೆ ಚಾಲನೆ ನೀಡುವರು ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ವೀರೇಶ್‌ ಹನಗವಾಡಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌, ರಾಜ್ಯ ಪ್ರಭಾರಿ ಅರುಣ್‌ ಸಿಂಗ್‌, ಸಹಪರಭಾರಿ ಡಿ.ಕೆ. ಅರುಣ, ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ. ರವಿ, ಕೇಂದ್ರದ ಸಚಿವರಾದ ಪ್ರಹ್ಲಾದ್‌ ಜೋಶಿ, ರಾಜೀವ್‌ ಚಂದ್ರಶೇಖರ್‌, ಶೋಭಾ ಕರಂದ್ಲಾಜೆ, ಎ. ನಾರಾಯಣ ಸ್ವಾಮಿ, ಭಗವಂತ ಖೂಬಾ, ರಾಜ್ಯದ ಸಚಿವರು, ಶಾಸಕರು, ಸಂಸದರು ಭಾಗವಹಿಸಲಿದ್ದಾರೆ. ಇದು ಸಾರ್ವಜನಿಕ ಸಮಾವೇಶವಲ್ಲ. ಅಪೇಕ್ಷಿತ 574 ಮಂದಿ ಮಾತ್ರ ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.

ಕೊರೊನಾದಿಂದಾಗಿ ಎರಡು ವರ್ಷಗಳಿಂದ ಪೂರ್ಣಪ್ರಮಾಣದಲ್ಲಿ ಕಾರ್ಯಕಾರಿಣಿ ನಡೆಸಲು ಆಗಿರಲಿಲ್ಲ. ಸಂಘಟನೆಯ ಪ್ರಮುಖರಷ್ಟೇ ಸೇರಿ ಚರ್ಚೆ ನಡೆಸಿದ್ದರು. ಈ ಬಾರಿ ಪೂರ್ಣಪ್ರಮಾಣದಲ್ಲಿ ನಡೆಯುತ್ತಿದೆ. ಕೋವಿಡ್‌ ನಿಯಮಗಳನ್ನು ಪಾಲನೆ ಮಾಡಿಕೊಂಡು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಕಾರ್ಯ ಬಗ್ಗೆ, ಪಕ್ಷವನ್ನು ಮುಂದೆ ಸಂಘಟಿಸಬೇಕಾದ ರೀತಿ ಬಗ್ಗೆ, ಮುಖ್ಯಮಂತ್ರಿಗೆ ಹೇಗೆ ಬೆಂಬಲ ನೀಡಬಹುದು ಎಂಬುದರ ಬಗ್ಗೆ, ಸರ್ಕಾರದ ಯೋಜನೆಗಳನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ತಲುಪಿಸಲು ಕಾರ್ಯಕರ್ತರು ಹೊತ್ತುಕೊಳ್ಳಬೇಕಾದ ಜವಾಬ್ದಾರಿ ಬಗ್ಗೆ, ಪಕ್ಷದ ತತ್ವ ಸಿದ್ಧಾಂತದ ಬಗ್ಗೆ ಕಾರ್ಯಕಾರಿಣಿಯಲ್ಲಿ ಚರ್ಚೆ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಪಕ್ಷದ ಪ್ರಮುಖ ಕಾರ್ಯಕ್ರಮ ಇದಾಗಿರುವುದರಿಂದ ನಗರವನ್ನು ಬಾವುಟ, ಬ್ಯಾನರ್‌, ಫ್ಲೆಕ್ಸ್‌, ವಿದ್ಯುತ್‌ದೀಪಗಳಿಂದ ಸಿಂಗರಿಸಲಾಗುವುದು. ನಗರದ ಸುತ್ತಮುತ್ತ ಒಟ್ಟು 52 ಕಿಲೋಮೀಟರ್‌ನಷ್ಟು ರಸ್ತೆಗಳಲ್ಲಿ ಈ ಅಲಂಕಾರ ಇರಲಿದೆ. ಕಾರ್ಯಕ್ರಮದ ಜವಾಬ್ದಾರಿಯನ್ನು 35 ತಂಡಗಳನ್ನು ಮಾಡಿ ಹಂಚಲಾಗಿದೆ. ಒಟ್ಟು 727 ಕಾರ್ಯಕರ್ತರು ಈ ತಂಡಗಳಲ್ಲಿ ಕೆಲಸ ಮಾಡಲಿದ್ದಾರೆ ಎಂದು ಹೇಳಿದರು.

ಮೋದಿ ಜನುಮದಿನಕ್ಕೆ 71 ಪೂರ್ಣಕುಂಭ
ಪ್ರಧಾನಿ ನರೇಂದ್ರ ಮೋದಿ ಅವರ ಜನುಮದಿನ ಸೆ.17ಕ್ಕಿದೆ. ಅವರಿಗೆ 71 ವರ್ಷ ತುಂಬುವ ಕಾರಣ ಅಂದು 71 ಪೂರ್ಣಕುಂಭಗಳ ಮೂಲಕ ಬಿಜೆಪಿಯ ಗಣ್ಯರನ್ನು ಸ್ವಾಗತಿಸಲಾಗುವುದು ಎಂದು ವೀರೇಶ್‌ ಹನಗವಾಡಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಬಿ.ಎಸ್‌. ಜಗದೀಶ್‌, ಡಿ.ಎಸ್‌. ಶಿವಶಂಕರ್‌, ಶ್ರೀನಿವಾಸ್‌ ದಾಸ ಕರಿಯಪ್ಪ, ದೇವರಮನಿ ಶಿವಕುಮಾರ್‌, ಸೊಕ್ಕೆ ನಾಗರಾಜ್‌, ಶಿವರಾಜ ಪಾಟೀಲ್‌, ಬಾತಿ ವೀರೇಶ್‌, ಗೋಪಾಲ ರಾವ್‌ ಮಾಣೆ, ಸಂಗಪ್ಪ ಗೌಡ್ರು, ಹನುಮಂತಪ್ಪ, ಬಸವರಾಜಯ್ಯ, ರಾಜು ನೀಲಗುಂದ, ಗುರು ಸೋಗಿ, ಎಚ್‌.ಪಿ. ವಿಶ್ವಾಸ್‌ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT