ಚನ್ನಗಿರಿ: ತಾಲ್ಲೂಕಿನ ರಾಜಗೊಂಡನಹಳ್ಳಿಯಲ್ಲಿ ಬೊಲೆರೊ ಪಿಕಪ್ ವಾಹನ ಮತ್ತು ಬೈಕ್ ನಡುವೆ ಗುರುವಾರ ಅಪಘಾತ ಉಂಟಾಗಿ ಮೂವರು ಮೃತಪಟ್ಟಿದ್ದಾರೆ.
ತಾಲ್ಲೂಕಿನ ಮಲ್ಲೇಶ್ವರ ಗ್ರಾಮದ ಅಜ್ಜಯ್ಯ(19), ಮಂಜು(18) ಹಾಗೂ ದೇವರಾಜ್(19) ಮೃತ ಪಟ್ಟ ಯುವಕರು.
ಬೊಲೆರೊ ಪಿಕಪ್ ವಾಹನ ಬೀರೂರು ಕಡೆಯಿಂದ ಚನ್ನಗಿರಿಗೆ ಹಾಗೂ ಬೈಕ್ ಸವಾರರು ಚನ್ನಗಿರಿಯಿಂದ ಮಲ್ಲೇಶ್ವರ ಗ್ರಾಮಕ್ಕೆ ಬರುತ್ತಿದ್ದಾಗ ಈ ಅಪಘಾತ ಉಂಟಾಗಿದೆ.
ಅಜ್ಜಯ್ಯ ಸ್ಥಳದಲ್ಲೇ ಮೃತಪಟ್ಟರೆ, ಮಂಜು ಹಾಗೂ ದೇವರಾಜ್ ಆಸ್ಪತ್ರೆಯಲ್ಲಿ ನಿಧನರಾದರು. ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು. ಸ್ಥಳದಲ್ಲಿ ನೂರಾರು ಜನರು ಜಮಾಯಿಸಿದ್ದರು. ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಲಾರಿ ಡಿಕ್ಕಿಯಾಗಿ ವಿದ್ಯುತ್ ಕಂಬಕ್ಕೆ ಹಾನಿ: ಅಪಾಯ ತಪ್ಪಿಸಿದ ಪೊಲೀಸರು
ದಾವಣಗೆರೆ: ಹರಿಹರ-ಶಿವಮೊಗ್ಗ ರಸ್ತೆಯ ಯಕ್ಕೆಗೊಂದಿ ಚೌಡೇಶ್ವರಿ ದೇವಸ್ಥಾನದ ಬಳಿ ಗುರುವಾರ ಮುಂಜಾನೆ ವಿದ್ಯುತ್ ಕಂಬಕ್ಕೆ ಲಾರಿ ಡಿಕ್ಕಿಯಾಗಿ ಎರಡು ವಿದ್ಯುತ್ ಕಂಬಗಳು ನೆಲಕ್ಕೆ ಉರುಳಿ ಬಿದ್ದಿದ್ದವು. ವಿದ್ಯುತ್ ತಂತಿ ರಸ್ತೆ ಮೇಲಿದ್ದವು. ಇದರಿಂದ ಇನ್ನಷ್ಟು ಅಪಾಯ ಆಗುವುದನ್ನು ಪೊಲೀಸರು ತಪ್ಪಿಸಿದ್ದಾರೆ.
ಲಾರಿ ಡಿಕ್ಕಿಯಾದ ಬಗ್ಗೆ 112ಗೆ ಮಾಹಿತಿ ಬಂದಿತ್ತು. 112 ಇಆರ್ವಿ ಪೊಲೀಸರು ಸ್ಥಳಕ್ಕೆ ಹೋಗಿದ್ದಲ್ಲದೇ ಬೆಸ್ಕಾಂ ಸಿಬ್ಬಂದಿಯನ್ನು ಕರೆಸಿ ವಿದ್ಯುತ್ ತಂತಿಗಳನ್ನು ತೆರವುಗೊಳಿಸಿದರು. ವಾಹನಗಳ ಸಂಚಾರ ಸುಗಮಗೊಳಿಸಿದರು. ಬಳಿಕ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿದರು.