60 ವರ್ಷಗಳ ಹಿಂದೆ ಕಟ್ಟಲಾಗಿರುವ ಈ ಸೇತುವೆ ಜೀರ್ಣಗೊಂಡಿತ್ತು. ಸೇತುವೆಯ ಮೇಲ್ಭಾಗದ ಗುಡ್ಡದ ಅಂಚಿನಲ್ಲಿ ಸುಮಾರು 120 ಮನೆಗಳಿದ್ದು, ಅಲ್ಲಿ ಸುಮಾರು 300ಕ್ಕೂ ಹೆಚ್ಚು ಜನ ವಾಸವಾಗಿದ್ದಾರೆ. ಸೇತುವೆ ಕುಸಿತದಿಂದ ಅಲ್ಲಿಯ ಜನರು, ದೈನಂದಿನ ಕೆಲಸಕಾರ್ಯ, ವ್ಯಾಪಾರ ವ್ಯವಹಾರ, ಕೃಷಿ ಮುಂತಾದ ಚಟುವಟಿಕೆಗಳಿಗೆ ಹೋಗಲು ಆಗುತ್ತಿಲ್ಲ. ಅಲ್ಲದೇ ಈ ಮನೆಗಳ ಸಮೀಪದಲ್ಲಿಯೇ ಇರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೋಗಲೂ ಸಹ ಕಣಿವೆಬಿಳಚಿ ಮತ್ತು ಸುತ್ತಲಿನ ರೋಗಿಗಳಿಗೂ ಮತ್ತು ಆಸ್ಪತ್ರೆಯ ಸಿಬ್ಬಂದಿಗೆ ತೊಂದರೆಯಾಗಿದೆ. ಜಿಲ್ಲಾಡಳಿತ ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಒಂದು ತಾತ್ಕಾಲಿಕ ಸೇತುವೆಯನ್ನು ನಿರ್ಮಿಸಿ ಗ್ರಾಮಸ್ಥರಿಗೆ ಅನುಕೂಲ ಮಾಡಿಕೊಡಬೇಕು ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಅಂಜಿನಪ್ಪ, ಸದಸ್ಯರಾದ ಎಸ್.ಅಣ್ಣೋಜಿರಾವ್, ಆಶಾಬಾಯಿ, ವಿಷ್ಣುಮೂರ್ತಿ ಒತ್ತಾಯಿಸಿದ್ದಾರೆ.