ದಾವಣಗೆರೆ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರು ಬಸ್ ಸಂಚಾರ ಸ್ಥಗಿತಗೊಳಿಸಿ ಶುಕ್ರವಾರ ಮುಷ್ಕರ ಆರಂಭಿಸಿದ್ದಾರೆ. ಇದರಿಂದ ಪ್ರಯಾಣಿಕರಿಗರಿಗೆ ತೊಂದರೆಯಾಯಿತು.
ಹೆರಿಗೆಯಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಬಂದಿದ್ದ ಬಾಣಂತಿ ಸೇರಿ ಹಲವರು ಇಲ್ಲಿನ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ತೊಂದರೆ ಅನುಭವಿಸಬೇಕಾಯಿತು.
ದಾವಣಗೆರೆಯ ಎರಡು ಹಾಗೂ ಹರಿಹರದ ಒಂದು ಡಿಪೊ ಸೇರಿ 164 ಬಸ್ಗಳಲ್ಲಿ ಬೆಂಗಳೂರು, ಮುದ್ದೇಬಿಹಾಳ್, ಶ್ರೀಶೈಲ ಹಾಗೂ ಹುಬ್ಬಳ್ಳಿಗಳಿಗೆ 4 ಬಸ್ಗಳು ಮಾತ್ರ ಸಂಚರಿಸಿದವು.
ಬೆಳಿಗ್ಗೆ 7 ಗಂಟೆಯ ಬಳಿಕ ಬಸ್ಗಳ ಸಂಚಾರ ಸ್ಥಗಿತಗೊಂಡಿತು. ಸೇವೆಯಿಂದ ಹೊರಗುಳಿದ ಚಾಲಕರು ಹಾಗೂ ನಿರ್ವಾಹಕರು ಬಸ್ ನಿಲುಗಡೆ ಮಾಡಿದರು. ಇದರಿಂದಾಗಿ ಬೇರೆ ಊರಿಗೆ ತೆರಳಲು ಬಂದಿದ್ದ ನಾಗರಿಕರು ಪರದಾಡುವಂತಾಯಿತು. ‘ಬಸ್ ಓಡಿಸುವಂತೆ ಬೆಳಿಗ್ಗೆಯಿಂದಲೇ ಸಾರಿಗೆ ನೌಕರರಿಗೆ ಮನವೊಲಿಸುತ್ತಿದ್ದೇವೆ. ಆದರೆ ಅವರು ಪಟ್ಟು ಸಡಿಲಿಸುತ್ತಿಲ್ಲ’ ಎಂದು ಕೆಎಸ್ಆರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಸಿದ್ದೇಶ್ವರ್ ಹೆಬ್ಬಾಳ್ ತಿಳಿಸಿದರು.
‘ನಾಗಮಂಗಲಕ್ಕೆ ಹೋಗಬೇಕಿತ್ತು. ಬೆಳಿಗ್ಗೆಯೇ ಬಸ್ ನಿಲ್ದಾಣಕ್ಕೆ ಬಂದೆವು. ಆದರೆ ಯಾವ ಬಸ್ಗಳು ಹೋಗುತ್ತಿಲ್ಲ. ಯಾವುದೇ ಸೂಚನೆ ಕೊಡದೇ ಬಸ್ ಸ್ಥಗಿತಗೊಳಿಸಿದರೆ ಎಲ್ಲಿ ಹೋಗುವುದು’ ಎಂಬುದು ಹೊನ್ನೇನಹಳ್ಳಿಯ ನಾಗರಾಜ್ ಅವರ ಪ್ರಶ್ನೆ.
‘ಪ್ರಮುಖ ಬೇಡಿಕೆಗಳು ಈಡೇರದಿದ್ದರೆ ಪ್ರತಿಭಟನೆ ಮುಂದುವರೆಸುತ್ತೇವೆ. ರಾಜ್ಯ ಸರ್ಕಾರ ಬೇಡಿಕೆ ಈಡೇರಿಸಿದರೆ ಕೆಲಸ ಪುನರಾರಂಭಿಸುತ್ತೇವೆ’ ಎಂದು ನೌಕರರ ಮುಖಂಡ ಓಂಕಾರ್ ಹೇಳಿದರು.