ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂತ ಸೇವಾಲಾಲ್ ಜಯಂತಿ ರದ್ದು

Last Updated 15 ಜನವರಿ 2022, 12:42 IST
ಅಕ್ಷರ ಗಾತ್ರ

ದಾವಣಗೆರೆ: ಕೊರೊನಾ ಕಾರಣದಿಂದಾಗಿ ಜಿಲ್ಲೆಯ ನ್ಯಾಮತಿ ತಾಲ್ಲೂಕಿನ ಸೂರಗೊಂಡನಕೊಪ್ಪದ ಭಾಯಾಗಡ್‌ನಲ್ಲಿ ಫೆ.14 ಹಾಗೂ 15ರಂದು ನಿಗದಿಯಾಗಿದ್ದ 283ನೇ ಸಂತ ಸೇವಾಲಾಲ್ ಜಯಂತಿಯನ್ನು ರದ್ದುಗೊಳಿಸಲಾಗಿದೆ.

ಜಿಲ್ಲಾಡಳಿತ ಭವನದಲ್ಲಿ ಶನಿವಾರ ನಡೆದ ಸಂತ ಸೇವಾಲಾಲರ ಜಯಂತಿ ಪೂರ್ವಭಾವಿ ಸಭೆಯಲ್ಲಿ ಜಿಲ್ಲಾಡಳಿತ, ಸೇವಾಲಾಲ್ ಪ್ರತಿಷ್ಠಾನ ಹಾಗೂ ಬಣಜಾರ ಸಮುದಾಯದ ಮುಖಂಡರ ಸಭೆಯಲ್ಲಿ ಒಕ್ಕೊರಲಿನ ತೀರ್ಮಾನಕ್ಕೆ ಬರಲಾಯಿತು.

ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ‘ಈಗಾಗಲೇ ಕೋವಿಡ್ ಹೆಚ್ಚಿನ ಪ್ರಮಾಣದಲ್ಲಿ ಹರಡುತಿದ್ದು, ಕೆಲ ಶಾಲಾ ಕಾಲೇಜುಗಳನ್ನು ಬಂದ್ ಮಾಡಲಾಗಿದೆ. ಜಿಲ್ಲೆಯಲ್ಲಿ ಪ್ರತಿದಿನ 200ರಷ್ಟು ಕೊರೊನ ಪ್ರಕರಣಗಳು ವರದಿಯಾಗುತ್ತಿದ್ದು, ಹಲವು ಜಾತ್ರೆಗಳನ್ನು ರದ್ದುಪಡಿಸಲಾಗಿದೆ. ಸಿರಿಗೆರೆ ಜಾತ್ರೆ, ಹರಜಾತ್ರೆ ರದ್ದುಪಡಿಸಲಾಗಿದೆ. ಸೂರಗೊಂಡನಕೊಪ್ಪದಲ್ಲಿ ಸೇವಾಲಾಲ್ ಜಯಂತಿ ಕಾರ್ಯಕ್ರಮಕ್ಕೆ 2 ಲಕ್ಷದಿಂದ 3 ಲಕ್ಷ ಜನ ಭಾಗವಹಿಸುವುದರಿಂದ ಜಾತ್ರೆ ರದ್ದು ಮಾಡಿ ಸರಳ ಜಯಂತಿ ಆಚರಿಸೋಣ’ ಎಂದರು.

ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಪಿ.ರಾಜೀವ್, ‘ಕೋವಿಡ್ ಭೀಕರವಾಗಿ ಹಬ್ಬುತಿದ್ದು ಇಂದಿನ ಅನಿವಾರ್ಯತೆ ಎಲ್ಲರಿಗೂ ಅರ್ಥವಾಗಿದೆ. ಸೇವಾಲಾಲ್ ಜಯಂತಿ ಸರಳವಾಗಿ ನಿಗದಿತ ದಿನಾಂಕದಂದೇ ನಡೆಯಲಿ. ಜಾತ್ರೆ ಆಚರಣೆ ಇಲ್ಲದಿರುವುದರಿಂದ ಯಾವುದೇ ಮಾಲಾಧಾರಿಗಳು ಕ್ಷೇತ್ರಕ್ಕೆ ಬರುವುದು ಬೇಡ. ತಮ್ಮ ತಮ್ಮ ಮನೆಗಳಲ್ಲಿಯೇ ಆಚರಣೆ ಮಾಡಿಕೊಳ್ಳಲಿ. ಕೊರೊನಾ ಕಡಿಮೆಯಾದಾಗ ಮುಂದಿನ ದಿನಗಳಲ್ಲಿ ಅದ್ಧೂರಿ ಆಚರಣೆ ಮಾಡಿಕೊಳ್ಳೋಣ’ ಎಂದರು.

ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗಳಾದ ಎಂ.ಪಿ.ರೇಣುಕಾಚಾರ್ಯ ಮಾತನಾಡಿ, ‘ಸೇವಾಲಾಲ್ ಜಯಂತಿ ಸಂಬಂಧ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲು ಸಭೆ ನಿಗದಿಯಾಗಿತ್ತು. ಆದರೆ ವೇಗವಾಗಿ ಹರಡುತ್ತಿರುವ ಕೊರೊನಾದಿಂದಾಗಿ ರಾಜ್ಯದ ಹಲವಾರು ಜಾತ್ರೆಗಳು ರದ್ದಾಗಿವೆ. ಸುಮಾರು 10 ಲಕ್ಷದಷ್ಟು ಜನ ಸೇರುತ್ತಿದ್ದ ಕೊಪ್ಪಳದ ಜಾತ್ರೆ ರದ್ದಾಗಿದೆ. ದೇಶದ ಏಕೈಕ ಬಣಜಾರ ಸಮುದಾಯದ ಪುಣ್ಯ ಕ್ಷೇತ್ರದಲ್ಲಿ ಬಹಳ ಅದ್ದೂರಿಯಾಗಿ ಜಾತ್ರೆ ಮಾಡಲಾಗುತಿತ್ತು. ಲಕ್ಷಾಂತರ ಮಾಲಾಧಾರಿಗಳು ಕಾಲ್ನಡಿಗೆಯಲ್ಲೇ ಕ್ಷೇತ್ರಕ್ಕೆ ಬರುತಿದ್ದರು. ಅತ್ಯಂತ ವಿಜೃಂಭಣೆಯಿಂದ ಜಾತ್ರೆ ನಡೆಯುತ್ತಿತ್ತು. ಆದರೆ ಕೊರೊನಾ ನಮ್ಮನ್ನು ಕಟ್ಟಿ ಹಾಕಿದೆ ಆದರೂ ಕ್ಷೇತ್ರದ ಯಾವುದೇ ಅಭಿವೃದ್ಧಿ ಕಾರ್ಯಗಳು ನಿಲ್ಲುವುದಿಲ್ಲ’ ಎಂದರು.

ಮಾಜಿ ಸಚಿವರಾದ ರುದ್ರಪ್ಪ ಲಮಾಣಿ ಮಾತನಾಡಿ, ‘ಜಿಲ್ಲಾಧಿಕಾರಿಗಳ ನಿರ್ಧಾರಕ್ಕೆ ನಮ್ಮ ಸಮ್ಮತಿ ಇದೆ. ಸರ್ಕಾರ ಸೂರಗೊಂಡನಕೊಪ್ಪ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಲಿ’ ಎಂದು ಆಗ್ರಹಿಸಿದರು.

ಸಭೆಯಲ್ಲಿ ಮಾಜಿ ಶಾಸಕರಾದ ಬಸವರಾಜ ನಾಯ್ಕ, ಜಯದೇವ ನಾಯ್ಕ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ರೇಷ್ಮಾ ಹಾನಗಲ್ ಹಾಗೂ ಸಮಾಜದ ಮುಖಂಡರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT