ದಾವಣಗೆರೆ: ಸಿಬಿಎಸ್ಇ 10ನೇ ತರಗತಿಯ ಫಲಿತಾಂಶ ಪ್ರಕಟಗೊಂಡಿದ್ದು, ಆಂಜನೇಯ ಬಡಾವಣೆಯ ಚೇತನಾ ಒಲಿಂಪಿಯಾಡ್ ಶಾಲೆಯ ವಿದ್ಯಾರ್ಥಿನಿ ಮುರುಕಿ ಶ್ರೀ ಬಾರುಣಿ ಶೇ 98.2 ಅಂಕ ಗಳಿಸಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ.
ಒಲಿಂಪಿಯಾಡ್ಗೆ ಶೇ 100: ಚೇತನಾ ಒಲಿಂಪಿಯಾಡ್ ಶಾಲೆಯಲ್ಲಿ ಪರೀಕ್ಷೆ ಬರೆದ ಎಲ್ಲ 65 ಮಕ್ಕಳು ಉತ್ತೀರ್ಣರಾಗಿದ್ದಾರೆ. ಅದರಲ್ಲಿ ಮುರುಕಿ ಶ್ರೀ ಬಾರುಣಿ (491), ಅಧಿತಿ (489), ಭಾವನ (484), ಹಿತೈಷಿ (478), ದರ್ಶನ್ ಡಿ.ಎ. (476) ಹಾಗೂ ವೈಷ್ಣವಿ (475) ಶೇ 95ಕ್ಕಿಂತ ಅಧಿಕ ಅಂಕ ಗಳಿಸಿದ್ದಾರೆ. 6 ಮಂದಿ ಶೇ 90ರ ಮೇಲೆ, 7 ಮಂದಿ ಶೇ 85ರ ಮೇಲೆ ಅಂಕ ಪಡೆದಿದ್ದಾರೆ ಎಂದು ಪ್ರಾಚಾರ್ಯ ಶ್ರೀನಿವಾಸಮೂರ್ತಿ ತಿಳಿಸಿದ್ದಾರೆ. ಕಾರ್ಯದರ್ಶಿ ವಿಜಯಲಕ್ಷ್ಮೀ ವೀರಮಾಚಿನೇನಿ, ನಿರ್ದೇಶಕರಾದ ಪವನ್ ಕುಮಾರ್, ಅನಿಲ್ ಕುಮಾರ್ ಅಭಿನಂದನೆ ಸಲ್ಲಿಸಿದ್ದಾರೆ.
ಆರ್ವಿಕೆ: ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರವು ಸಿಬಿಎಸ್ಇಯಲ್ಲಿ ಶೇ 100 ಫಲಿತಾಂಶ ಪಡೆದಿದೆ. ಪರೀಕ್ಷೆ ಬರೆದ ಎಲ್ಲ 52 ಮಕ್ಕಳು ಉತ್ತೀರ್ಣರಾಗಿದ್ದಾರೆ. ಎಸ್.ಎಚ್. ಭಾನುಪ್ರಕಾಶ್–ಸುಜಾತ ದಂಪತಿಯ ಮಗ ಯದುನಂದನ ಎಚ್.ಬಿ. 96.02 (480) ಅಂಕ ಪಡೆದು ಶಾಲೆಗೆ ಪ್ರಥಮ ಸ್ಥಾನ ಬಂದಿದ್ದಾನೆ. ಡಾ.ರಾಜು–ರಶ್ಮಿ ನಾಯಕ್ ದಂಪತಿಯ ಮಗ ಯಶ್ ಆರ್. ಶೇ 94.5 ಅಂಕ ಗಳಿಸಿದ್ದಾನೆ. ಖುಷಿ ಎಂ.ಡಿ. ಹಾಗೂ ಶ್ರೀನಿವಾಸ್ ತಲಾ ಶೇ 93.04 ಅಂಕ ಗಳಿಸಿದ್ದಾರೆ.
ಒಟ್ಟು 23 ಮಕ್ಕಳು ಅತ್ಯುನ್ನತ ಶ್ರೇಣಿ, 29 ಮಕ್ಕಳು ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ ಎಂದು ಆಡಳಿತ ಮಂಡಳಿ, ಪ್ರಿನ್ಸಿಪಾಲ್ ತಿಳಿಸಿದ್ದಾರೆ.
ಸಿದ್ಧಗಂಗಾ: ಸಿದ್ಧಗಂಗಾ ಶಾಲೆ ಪ್ರತಿ ವರ್ಷದಂತೆ ಈ ಬಾರಿಯೂ ಸಿಬಿಎಸ್ಇಯಲ್ಲಿ ಶೇ 100 ಫಲಿತಾಂಶ ಪಡೆದಿದೆ.
ತಾಜ್ ಮೊಹಮ್ಮದ್ ಅಫ್ರಿದಿ ಮತ್ತು ಸಮೀನಾ ಅಂಜುಂ ದಂಪತಿಯ ಪುತ್ರಿ ಹಾಜ್ರ ಖಾನುಂ ಅಫ್ರಿದಿ ಶೇ 94.6 ಅಂಕ ಗಳಿಸಿ ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ.
ಶ್ರೇಯಸ್ ಪಟಕಿ ಶೇ 94, ಚಿನ್ಮಯ್ ಎಂ.ಡಿ. ಶೇ 92.6, ಲಾವಣ್ಯ ಶೇ 89 ಹಾಗೂ ವಿನುತಾ ವಿ. ಹಲ್ಲೂರು ಶೇ 88.6 ಗಳಿಸಿದ್ದಾರೆ.
9 ಮಕ್ಕಳು ಅತ್ಯುನ್ನತ ದರ್ಜೆ, 32 ಮಕ್ಕಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ಪ್ರಾಚಾರ್ಯೆ ಎಂ.ಪಿ. ಶಾಂತಿ ಮತ್ತು ಆಡಳಿತ ಮಂಡಳಿ ತಿಳಿಸಿದೆ.
ಸೇಂಟ್ ಜಾನ್ಸ್: ಸಿಬಿಎಸ್ಇಯಲ್ಲಿ ನಗರದ ಸೇಂಟ್ ಜಾನ್ಸ್ ಇಂಗ್ಲಿಷ್ ಮೀಡಿಯಂ ಶಾಲೆ ಶೇ 100 ಫಲಿತಾಂಶ ಪಡೆದಿದೆ.
42 ವಿದ್ಯಾರ್ಥಿಗಳಲ್ಲಿ, 7 ಮಂದಿ ಅತ್ಯುನ್ನತ ಶ್ರೇಣಿ, 21 ವಿದ್ಯಾರ್ಥಿಗಳು ಪ್ರಥಮ ದರ್ಜೆ, 15 ವಿದ್ಯಾರ್ಥಿಗಳು ದ್ವಿತೀಯ ದರ್ಜೆ ಪಡೆದಿದ್ದಾರೆ. ಗಗನ್ ಎಚ್.ಎನ್ ಶೇ 91.4 ಅಂಕ ಗಳಿಸಿ, ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾನೆ.
ಜೈನ್ ವಿದ್ಯಾಲಯ: ಶಾಮನೂರು ಜೈನ್ ವಿದ್ಯಾಲಯದಲ್ಲಿ ಸಿಬಿಎಸ್ಇ ಪರೀಕ್ಷೆ ಬರೆದ ಎಲ್ಲ 47 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ 100 ಫಲಿತಾಂಶ ಪಡೆದಿದ್ದಾರೆ. 15 ಮಂದಿ ಅತ್ಯುನ್ನತ ಶ್ರೇಣಿ, 21 ಮಂದಿ ಪ್ರಥಮ ಶ್ರೇಣಿ, 11 ಮಂದಿ ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದಾರೆ ಎಂದು ಶಾಲಾ ಆಡಳಿತ ಮಂಡಳಿ ತಿಳಿಸಿದೆ.
ತಂದೆಗೊಂದು, ಮಗಳಿಗೊಂದು ಕನಸು
ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿರುವ ಮುರುಕಿ ಶ್ರೀ ಬಾರುಣಿಗೆ ನಾಸಾ ವಿಜ್ಞಾನಿ ಆಗಬೇಕು ಎಂಬ ಕನಸು. ತಂದೆ ಮಲ್ಲಿಕಾರ್ಜುನ ಅವರಿಗೆ ಮಗಳು ವೈದ್ಯೆ ಆಗಬೇಕು ಎಂಬ ಕನಸು.
ಈ ವಿಚಾರವನ್ನು ಬಾರುಣಿಯೇ ಬಿಚ್ಚಿಟ್ಟಳು. ವಿಜ್ಞಾನ ವಿಭಾಗ ತೆಗೆದುಕೊಂಡು ಪಿಯು ಮುಗಿಸುವುದು. ಬಳಿಕ ನಾಸಾ ಅಥವಾ ವೈದ್ಯೆ ಯಾವುದು ವೈದ್ಯೆಯಾಗುವುದು ಎಂಬುದನ್ನು ಆಮೇಲೆ ಆಯ್ಕೆ ಮಾಡಿಕೊಳ್ಳುತ್ತೇನೆ’ ಎಂದು ಶಿವಕುಮಾರ ಬಡಾವಣೆಯ ನಿವಾಸಿಯಾಗಿರುವ ಉಪನ್ಯಾಸಕ ಮಲ್ಲಿಕಾರ್ಜುನ್–ಲಕ್ಷ್ಮೀ ದಂಪತಿಯ ಮಗಳು ಬಾರುಣಿ ತಿಳಿಸಿದಳು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.