ದಾವಣಗೆರೆ: ನಗರದ ಪಿ.ಬಿ. ರಸ್ತೆಯ ಹಳೇ ಈದ್ಗಾ, ಮಾಗನಹಳ್ಳಿ ರಸ್ತೆಯ ರಜಾವುಲ್ ಮುಸ್ತಫಾ ನಗರದ ಹೊಸ ಈದ್ಗಾ ಹಾಗೂ ಎಸ್ಒಜಿ ಕಾಲೊನಿಯ ಖಲಂದರಿಯಾ ಈದ್ಗಾ ಬಳಿ ಬುಧವಾರ ಬೆಳಿಗ್ಗೆ ಸಾಮೂಹಿಕ ಪ್ರಾರ್ಥನೆ ಮಾಡುವ ಮೂಲಕ ಮುಸ್ಲಿಂ ಸಮುದಾಯದವರು ಬುಧವಾರ ರಂಜಾನ್ ಹಬ್ಬಕ್ಕೆ ತೆರೆ ಎಳೆದರು.
ಒಂದು ತಿಂಗಳು ಉಪವಾಸ ಆಚರಿಸಿದ ಬಳಿಕ ಜಕಾತ್, ಫಿತ್ರ ದಾನ ಮಾಡಿದರು.
ಶ್ವೇತವಸ್ತ್ರ ಧರಿಸಿ ಗುಂಪು ಗುಂಪಾಗಿ ಖಬರ್ಸ್ಥಾನ ಹಾಗೂ ಮಸೀದಿಗಳತ್ತ ಬಂದ ಮುಸ್ಲಿಮರು ಮೊದಲು ಸಿಹಿ ಹಂಚಿ, ಪರಸ್ಪರ ಆಲಿಂಗಿಸಿಕೊಂಡು ಶುಭಾಶಯ ವಿನಿಮಯ ಮಾಡಿಕೊಂಡರು. ನಂತರ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಈ ವೇಳೆ ಹೊಸ ಬಟ್ಟೆಗಳಲ್ಲಿ, ಸಾಂಪ್ರದಾಯಿಕ ಪೋಷಾಕುಗಳಲ್ಲಿ ಕಂಗೊಳಿಸುತ್ತಿದ್ದ ಮಕ್ಕಳು ಹಬ್ಬದ ಸಂಭ್ರಮ ಹೆಚ್ಚಿಸಿದ್ದರು.
ಈದ್ ಉಲ್ ಫಿತ್ರ್ ಅಂಗವಾಗಿ ನಗರದ ಎಲ್ಲಾ ಮಸೀದಿಗಳಲ್ಲೂ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ಪಿ.ಬಿ. ರಸ್ತೆಯ ಹಳೇ ಈದ್ಗಾ ಮೈದಾನ ತುಂಬಿದ್ದರಿಂದ ಪಿ.ಬಿ. ರಸ್ತೆಯ ಎರಡು ಬದಿಗಳಲ್ಲೂ ಚಾಪೆ, ಚಾದರ ಹಾಸಿ, ಮುಸ್ಲಿಮರು ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಿದ್ದರು. ಈದ್ಗಾ ಮೈದಾನ ಸಮೀಪ ಸುಮಾರು ಅರ್ಧ ಕಿ.ಮೀ ಉದ್ದಕ್ಕೂ ಪಿ.ಬಿ. ರಸ್ತೆ ಶ್ವೇತ ವಸ್ತ್ರಧಾರಿಗಳಿಂದ ಕಂಗೊಳಿಸುತ್ತಿತ್ತು.
ಮುಸ್ಲಿಮರ ಪ್ರಾರ್ಥನೆಗೆ ಅನುವು ಮಾಡಿಕೊಡುವುದಕ್ಕಾಗಿ ಪಿ.ಬಿ. ರಸ್ತೆಯನ್ನು ಈ ಪ್ರದೇಶದಲ್ಲಿ ವಾಹನಗಳ ಓಡಾಟವನ್ನು ಪೊಲೀಸರು ನಿರ್ಬಂಧಿಸಿದರು. ಪರ್ಯಾಯ ರಸ್ತೆಗಳಲ್ಲಿ ವಾಹನ ಸಾಗಾಟಕ್ಕೆ ವ್ಯವಸ್ಥೆ ಮಾಡಿದರು. ಯಾವುದೇ ತೊಡಕುಂಟಾಗದಂತೆ ಪೊಲೀಸರು ಬಿಗಿ ಬಂದೋಬಸ್ತು ಮಾಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಚೇತನ್, ಇತರ ಅಧಿಕಾರಿಗಳು ರಂಜಾನ್ ಶುಭಾಶಯ ಕೋರಿದರು.
ಸಾಮೂಹಿಕ ಪ್ರಾರ್ಥನೆಯ ಬಳಿಕ ಕೆಲವರು ಖಬರ್ಸ್ಥಾನದಲ್ಲಿ ಇರುವ ತಮ್ಮ ಹಿರಿಯರ ಸಮಾಧಿಗೆ
ವಿಶೇಷ ಭೋಜನ: ತಿಂಗಳಿಡೀ ಉಪವಾಸ ಆಚರಿಸಿದ್ದ ಮುಸ್ಲಿಮರು, ಈದ್ ಉಲ್ ಫಿತ್ರ್ ದಿನ ವಿಶೇಷ ಊಟ ಸೇವಿಸಿದರು. ಶಾವಿಗೆ, ದ್ರಾಕ್ಷಿ, ಗೋಡಂಬಿ, ಬಾದಾಮಿ, ಸಕ್ಕರೆ, ಹಾಲು, ಗಸಗಸೆ, ಪಿಸ್ತಾ ಬಳಸಿ ತಯಾರಿಸುವ ವಿಶೇಷ ಸಿಹಿ ತಿಂಡಿಗಳು ಹಾಗೂ ಬಗೆಬಗೆಯ ಮಾಂಸಾಹಾರಗಳನ್ನು ಮನೆಯಲ್ಲೇ ಸಿದ್ಧಪಡಿಸಲಾಗಿತ್ತು.