ದಾವಣಗೆರೆ: ಮತದಾರರು ತಮ್ಮ ಮತದಾನದ ಹಕ್ಕನ್ನು ಚಲಾಯಿಸುವ ಮೂಲಕ ಉತ್ತಮ ನಾಯಕನನ್ನು ಆಯ್ಕೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಪಾಲಿಕೆಯಿಂದ ಸೋಮವಾರ ಮಹಾನಗರಪಾಲಿಕೆ ಆವರಣದಲ್ಲಿ ಏರ್ಪಡಿಸಿದ್ದ 11ನೇ ರಾಷ್ಟ್ರೀಯ ಮತದಾರರ ದಿನಾಚರಣೆಯಲ್ಲಿ ಅವರು ಮಾತನಾಡಿದರು.
‘ನಾವು ಬದಲಾಗದೇ ಎದುರಿಗೆ ಇರುವವರು ಬದಲಾಗಬೇಕು ಎಂದು ನಿರೀಕ್ಷಿಸಲು ಬರುವುದಿಲ್ಲ. ಹಾಗೆಯೇ ನಾವು ಉತ್ತಮ ನಾಯಕನನ್ನು ಆರಿಸದೇ ಉತ್ತಮ ಆಡಳಿತ ನಿರೀಕ್ಷಿಸಲು ಸಾಧ್ಯವಿಲ್ಲ. ದೇಶ, ರಾಜ್ಯಗಳನ್ನು ಆಳಲು ಸಮರ್ಥ ನಾಯಕರನ್ನು ಆರಿಸಲು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ 18 ವರ್ಷ ತುಂಬಿದ ಪ್ರತಿ ವ್ಯಕ್ತಿಗೆ ಮತದಾನದ ಹಕ್ಕನ್ನು ನಮ್ಮ ಸಂವಿಧಾನ ನೀಡಿದೆ. ಸುಶಿಕ್ಷಿತರು ಹೆಚ್ಚಿರುವ ನಗರ ಪ್ರದೇಶಗಳಲ್ಲೇ ಮತದಾನ ಕಡಿಮೆಯಾಗುತ್ತಿದೆ. ಶೇ 50ರಿಂದ ಶೇ 60ರಷ್ಟು ಮಾತ್ರ ಮತ ಚಲಾವಣೆಯಾಗುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಉತ್ತಮ ಸ್ಪಂದನೆ ದೊರೆಯುತ್ತದೆ. ಈಚೆಗೆ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಶೇ 85 ಮತದಾನ ಆಗಿರುವುದೇ ಇದಕ್ಕೆ ಸಾಕ್ಷಿ’ ಎಂದು ತಿಳಿಸಿದರು.
ಮತದಾರರ ಚೀಟಿ ಪಡೆಯುವಲ್ಲಿನ ಉತ್ಸಾಹ ಮತದಾನದಲ್ಲಿ ಪಾಲ್ಗೊಳ್ಳುವಲ್ಲಿ ಇಲ್ಲ. ಕೇವಲ ಗುರುತಿನ ಚೀಟಿ ರೀತಿಯಲ್ಲಿ ಎಪಿಕ್ ಕಾರ್ಡ್ ಬಳಕೆಯಾಗಬಾರದು. ಜವಾಬ್ದಾರಿಯುತ ನಾಗರಿಕನಾಗಿ ಮತದಾನದ ಹಕ್ಕನ್ನು ಚಲಾಯಿಸಬೇಕು. ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸುವುದಷ್ಟೇ ಮುಖ್ಯವಲ್ಲ. ತಿದ್ದುಪಡಿ, ರದ್ದುಪಡಿಸುವುದು ಕೂಡ ಅಷ್ಟೇ ಮುಖ್ಯ. ಆರೋಗ್ಯಕರ ಚುನಾವಣೆಗೆ ಬುನಾದಿ ಆರೋಗ್ಯಯುತವಾದ ಮತದಾರರ ಪಟ್ಟಿ ಎಂದು ವಿಶ್ಲೇಷಿಸಿದರು.
ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೀವ್ ಎಂ., ‘ಬಲವಂತದಿಂದ ಮತದಾನ ಮಾಡಿಸಲು ಸಾಧ್ಯವಿಲ್ಲ. ಸರ್ಕಾರದ ಸೌಲಭ್ಯಗಳು ಪಡೆದುಕೊಳ್ಳುವುದಕ್ಕೆ ಹಲವಾರು ಮಾರ್ಗಗಳಿವೆ. ಅದನ್ನು ಹೊರತುಪಡಿಸಿ ಮತದಾನ ಬಹಿಷ್ಕರಿಸುವುದು ತರವಲ್ಲ. ಮತದಾನವು ಗೌಪ್ಯವಾಗಿ ನಡೆಯಲಿದ್ದು, ನಿರ್ಭೀತಿಯಿಂದ ಮತದಾನ ಮಾಡಬಹುದು’ ಎಂದು ತಿಳಿಸಿದರು.
ಉಪ ವಿಭಾಗಾಧಿಕಾರಿ ಮಮತ ಹೊಸಗೌಡರ್, ಡಿಡಿಪಿಐ ಪರಮೇಶ್ವರಪ್ಪ, ಡಿಡಿಪಿಯು ನಾಗರಾಜ್ ಇದ್ದರು.
ಹೊಸ ಮತದಾರರಿಗೆ ಗುರುತಿನ ಚೀಟಿ ವಿತರಿಸಲಾಯಿತು. ಮತದಾನ ಜಾಗೃತಿ ಕುರಿತು ಏರ್ಪಡಿಸಿದ್ದ ಪ್ರಬಂಧ, ಚಿತ್ರಕಲೆ, ಪೋಸ್ಟರ್ ಮೇಕಿಂಗ್ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ ಸ್ವಾಗತಿಸಿದರು. ಮತದಾರ ನೋಂದಣಾಧಿಕಾರಿ ಚಂದ್ರಪ್ಪ ಸಿ. ವಂದಿಸಿದರು. ನಾಗರಾಜ್ ನಿರೂಪಿಸಿದರು.
ಜಿಲ್ಲೆಯ ಮಕ್ಕಳಿಗೆ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಬಹುಮಾನ
ಯುವಜನರಲ್ಲಿ ಮತದಾನದ ಅರಿವು ಮತ್ತು ಮಹತ್ವ ತಿಳಿಸಲು ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ಏರ್ಪಡಿಸಲಾಗಿದ್ದ ಸ್ಪರ್ಧೆಗಳಲ್ಲಿ ಜಿಲ್ಲೆಯ ವಿದ್ಯಾರ್ಥಿಗಳು ಬಹುಮಾನ ಪಡೆದು ಜಿಲ್ಲೆಗೆ ಹೆಸರು ತಂದಿದ್ದಾರೆ. ರಾಜ್ಯ ಮಟ್ಟದಲ್ಲಿ ಕನ್ನಡ ಪ್ರಬಂಧ ಸ್ಪರ್ಧೆಯಲ್ಲಿ ಜಿಲ್ಲೆಯ ಜಯಶ್ರೀ ಮೊದಲನೇ ಬಹುಮಾನ, ಪೋಸ್ಟರ್ ಮೇಕಿಂಗ್ ಸ್ಪರ್ಧೆಯಲ್ಲಿ ನಿವೇದಿತಾ ಮೂರನೇ ಬಹುಮಾನ, ಪ್ರೌಢಶಾಲೆ ಮಟ್ಟದ ಕನ್ನಡ ಪ್ರಬಂಧ ಸ್ಪರ್ಧೆಯಲ್ಲಿ ಭಾವನ ಎಸ್.ಯು ತೃತೀಯ ಮತ್ತು ಇಂಗ್ಲಿಷ್ ಪ್ರಬಂಧ ಸ್ಪರ್ಧೆಯಲ್ಲಿ ಅಂಕಿತಾ ಎರಡನೇ ಬಹುಮಾನ ಪಡೆದಿದ್ದಾರೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪದ್ಮ ಬಸವಂತಪ್ಪ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.