ದಾವಣಗೆರೆ: ಎಂಸಿಸಿ ‘ಬಿ’ ಬ್ಲಾಕ್ನಲ್ಲಿ ಫುಟ್ಪಾತ್ವರೆಗೆ ವಿಸ್ತರಿಸಿದ್ದ ಅಂಗಡಿಗಳನ್ನು, ಫುಟ್ಪಾತ್ ಮೇಲೆ ಕಟ್ಟಿಕೊಂಡಿದ್ದ ಚಾವಣಿಗಳನ್ನು ಮಹಾನಗರ ಪಾಲಿಕೆಯು ಬುಧವಾರ ಬೆಳಿಗ್ಗೆಯೇ ಕಾರ್ಯಾಚರಣೆ ನಡೆಸಿ ತೆರವುಗೊಳಿಸಿದೆ.
ಎಂಸಿಸಿ ಬಿ ಬ್ಲಾಕ್ನಲ್ಲಿರುವ ಜೆಜೆಎಂ ಮೆಡಿಕಲ್ ವಿದ್ಯಾರ್ಥಿ ನಿಲಯದ ಮುಂಭಾಗದಲ್ಲಿರುವ 6ನೇ ಮುಖ್ಯರಸ್ತೆಯ ರಾಜಋಷಿ ಭಗೀರಥ ರಸ್ತೆ ಮತ್ತು ಏಳನೇ ಮುಖ್ಯ ರಸ್ತೆಯಲ್ಲಿ ತೆರವು ಕಾರ್ಯಾಚರಣೆ ನಡೆಯಿತು. ಜೆಸಿಬಿ ಬಳಸಿ ಆಕ್ರಮಿತ ಕಟ್ಟಡಗಳನ್ನು ನೆಲಸಮಗೊಳಿಸಲಾಯಿತು.
ಫುಟ್ಪಾತ್ ಮೇಲೆ ತಿಂಡಿ ಅಂಗಡಿಗಳು ಇನ್ನಿತರೇ ವ್ಯಾಪಾರ ನಡೆಸುತ್ತಿದೆ. ಇದರಿಂದ ಈ ಭಾಗದಲ್ಲಿ ವಾಹನ ಸಂಚಾರ ದುಸ್ತರವಾಗಿದೆ. ಈ ಅಂಗಡಿಗಳನ್ನು ತೆರವು ಮಾಡುವಂತೆ ಸ್ಥಳೀಯರು ಮೂರು ತಿಂಗಳ ಹಿಂದೆಯೇ ಮೇಯರ್, ಆಯುಕ್ತರಿಗೆ ಮನವಿ ಮಾಡಿದ್ದರು. ಕೊರೊನಾ ನಿಯಂತ್ರಣಕ್ಕೆ ಬಂದು ಅಂಗಡಿಗಳನ್ನು ಪುನರ್ ಆರಂಭಿಸುವ ವೇಳೆಗೆ ಇವುಗಳನ್ನು ತೆರವುಗೊಳಿಸಬೇಕು ಎಂದು ಪಾಲಿಕೆಯಿಂದ ಸೂಚಿಸಲಾಗಿತ್ತು. ಆದರೆ ಯಾವುದೇ ಅಂಗಡಿಗಳು ತೆರವಾಗಿರಲಿಲ್ಲ.
ಏಳು ಅಂಗಡಿಗಳು ಮತ್ತು ಮಳಿಗೆಗಳ ಚಾವಣಿಗಳನ್ನು ತೆರವು ಮಾಡಲಾಯಿತು. ಅಷ್ಟೇ ಅಲ್ಲದೇ ಫುಟ್ಪಾತ್ನ್ನು ಒತ್ತುವರಿ ಮಾಡಿಕೊಂಡು ಮೆಟ್ಟಲು ಮಾಡಿಕೊಂಡಿದ್ದ ಸ್ಥಳವನ್ನು ಜೆಸಿಬಿ ಯಂತ್ರ ಬಳಸಿ ತೆರವು ನಡೆಯಲಾಯಿತು.
ಪಾಲಿಕೆ ಉಪ ಆಯುಕ್ತ ಡಿ.ಎಸ್. ಚಂದ್ರಶೇಖರ್, ಕಾರ್ಯನಿರ್ವಾಹಕ ಎಂಜಿನಿಯರ್ ಹರ್ಷಿತಾ, ಎಇಇ ಪ್ರದೀಪ್, ಎಂಜಿನಿಯರ್ ಮಧುಸೂದನ್, ಆರ್ಒ ಸುರೇಶ್ ಪಾಟೀಲ್, ಎಆರ್ಒ ವಿನಯ್ ಕುಮಾರ್, ಬಿಲ್ ಕಲಕ್ಟೆರ್ ಗೋವಿಂದರಾಜ್, ಮಂಜುನಾಥ ಅವರೂ ಇದ್ದರು. ಪೊಲೀಸರು ಬಂದೋಬಸ್ತು ಒದಗಿಸಿದ್ದರು.