ದಾವಣಗೆರೆ: ಸ್ಪರ್ಧಾತ್ಮಕ ವ್ಯವಸ್ಥೆಯಲ್ಲಿ ಯಶಸ್ಸು ಪಡೆಯಲು ಜ್ಞಾನವೇ ಶಕ್ತಿಯಾಗಿದ್ದು, ಜ್ಞಾನ ಮತ್ತು ಕೌಶಲ ಹೆಚ್ಚಿಸಿಕೊಂಡಾಗ ವ್ಯಕ್ತಿತ್ವ ವಿಕಸನಗೊಳ್ಳುತ್ತದೆ. ಆತ್ಮವಿಶ್ವಾಸ ಮತ್ತು ಸದೃಢ ಮನಸ್ಸು ಯಶಸ್ಸಿನ ಆಯುಧಗಳು ಎಂದು ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷ ಡಾ. ಎಚ್.ಎಸ್. ಮಂಜುನಾಥ್ ಕುರ್ಕಿ ಅಭಿಪ್ರಾಯಪಟ್ಟರು.
ನಗರದ ಚೈತನ್ಯ ಹೈ-ಟೆಕ್ ವಾಣಿಜ್ಯ ಮತ್ತು ನಿರ್ವಹಣಾ ಪದವಿ ಕಾಲೇಜಿನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಉದ್ಯೋಗ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಯಾವಾಗ ನಿಮ್ಮ ಆತ್ಮವಿಶ್ವಾಸದ ಕೊರತೆಯಾಗುತ್ತದೆಯೋ ಅಂದೇ ನಿಮ್ಮ ಅಂತ್ಯವಾಗುತ್ತದೆ. ನೀವು ದುರ್ಗಮದ ಹಾದಿಯಲ್ಲಿ ಸಾಗಿ ವಿಶ್ವವೇ ಬೆರಗಾಗುವಂತೆ ಸಾಧನೆ ಮಾಡಬೇಕು’ ಎಂದು ಸಲಹೆ ನೀಡಿದರು.
ಸಂಸ್ಥೆ ಅಧ್ಯಕ್ಷ ಅಭಿಷೇಕ್ ಬೇತೂರು ಅಧ್ಯಕ್ಷತೆ ವಹಿಸಿ ಮಾತನಾಡಿ, ‘ಮುಂದೆಯೂ ಇಂತಹ ಹೆಸರಾಂತ ಕಂಪನಿಗಳ ಸಹಭಾಗಿತ್ವದಲ್ಲಿ ಇಂತಹ ಮೇಳ ಆಯೋಜಿಸಲಾಗುವುದು’ ಎಂದರು.
ಕಾರ್ಯದರ್ಶಿ ಪ್ರೀತಿ, ಐಸಿಐಸಿಐ ಕರ್ನಾಟಕ ರಿಕ್ರೂಟ್ ಮೆಂಟ್ ಮ್ಯಾನೇಜರ್ ಸುರೇಂದ್ರ ಇದ್ದರು. ಕ್ರಿಯೇಟಿವ್ ಎಂಜಿನಿಯರ್ಸ್ ಕಂಪನಿ, ಐಸಿಐಸಿಐ ಬ್ಯಾಂಕ್, ಡಿಪ್ ಸನ್ಸ್, ಸ್ಟಾರ್ ಹೆಲ್ತ್ ಇನ್ಷುರೆನ್ಸ್ ಕಂಪನಿಗಳು ಪಾಲ್ಗೊಂಡಿದ್ದವು.