ಹರಪನಹಳ್ಳಿ: ‘ತಾಲ್ಲೂಕಿನ ಬ್ಲಾಕ್ ಕಾಂಗ್ರೆಸ್ ಸಮಿತಿಯಲ್ಲಿ ಗುಂಪುಗಾರಿಕೆ ಹೆಚ್ಚಾಗಿದ್ದು, ಶೀಘ್ರ ಮಾತುಕತೆಯ ಮೂಲಕ ಒಂದುಗೂಡಿಸುವ ಸಲುವಾಗಿ ತಾಲ್ಲೂಕಿನಲ್ಲಿ ಕಾಂಗ್ರೆಸ್ ಸಮನ್ವಯ ಸಮಿತಿ ರಚಿಸಲಾಗುವುದು’ ಎಂದು ಕ್ಷೇತ್ರ ಉಸ್ತುವಾರಿ, ಚುನಾವಣೆ ವೀಕ್ಷಕ ಅಲ್ಲಂ ವೀರಭದ್ರಪ್ಪ ತಿಳಿಸಿದ್ದಾರೆ.
ಪಟ್ಟಣದ ಆರ್ಎಸ್ಎನ್ ಶಾಲೆಯಲ್ಲಿ ಭಾನುವಾರ ಕಾಂಗ್ರೆಸ್ ಬ್ಲಾಕ್ ಸಮಿತಿ ಆಯೋಜಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.
ಪಕ್ಷದ ಗೊಂದಲದ ಬಗ್ಗೆ ಪ್ರಾಥಮಿಕ ಮಾಹಿತಿಯನ್ನು ಹೈಕಮಾಂಡ್ಗೆ ಸಲ್ಲಿಸಲಾಗುವುದು. ಕಾಂಗ್ರೆಸ್ ಬೆಂಬಲಿತರನ್ನು ಗೆಲ್ಲಿಸಲು ಪ್ರತಿ ಗ್ರಾಮ ಪಂಚಾಯಿತಿಗೂ ಚುನಾವಣೆ ವೀಕ್ಷಕರನ್ನು ನೇಮಿಸಲಾಗುವುದು ಎಂದರು.
‘ಗುಂಪುಗಾರಿಕೆಯಿಂದ ಯಾವ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ. ಪಕ್ಷದ ಗೆಲುವಿಗೆ ಶ್ರಮಿಸಿ. ಪ್ರತಿ ಹೋಬಳಿ, ಗ್ರಾಮ ಪಂಚಾಯಿತಿ ಹಂತದ ಮುಖಂಡರು ತಳಮಟ್ಟದಿಂದ ಕಾರ್ಯಕರ್ತರನ್ನು ಒಗ್ಗೂಡಿಸಲು ಪ್ರಯತ್ನಿಸಿ. ಗುಂಪುಗಾರಿಕೆ ಮಾಡಿದರೆ ಶಿಸ್ತು ಕ್ರಮ ಜರುಗಿಸಲು ಹೈಕಮಾಂಡ್ಗೆ ವರದಿ ಸಲ್ಲಿಸುತ್ತೇನೆ’ ಎಂದರು.
ವೀಕ್ಷಕರಿಗೆ ದೂರು: ಮಹಿಳಾ ಘಟಕದ ಕೆಪಿಸಿಸಿ ರಾಜ್ಯ ಕಾರ್ಯದರ್ಶಿ ಎಂ.ಪಿ. ಲತಾ ಮಲ್ಲಿಕಾರ್ಜುನ, ‘ಪಕ್ಷದ ಕಾರ್ಯಕ್ರಮ, ಸಭೆಯ ಬಗ್ಗೆ ನಮಗೆ ಮಾಹಿತಿ ಕೊಡುವುದಿಲ್ಲ. ಪಕ್ಷಕ್ಕಾಗಿ ದುಡಿಯುತ್ತಿದ್ದೇವೆ ನಮ್ಮ ಕೆಲಸ ಪರಿಗಣಿಸಿ’ ಎಂದರು.
ಮುಖಂಡ ಕಿತ್ತೂರು ಕೊಟ್ರಪ್ಪ, ‘ತಾಲ್ಲೂಕಿನಲ್ಲಿ ಗುಂಪುಗಾರಿಕೆ ಹೆಚ್ಚಾಗಿ ಕಾರ್ಯಕರ್ತರು ಗೊಂದಲದಲ್ಲಿದ್ದಾರೆ. ನಮ್ಮಂತಹ ನಿಷ್ಟಾವಂತ ಕಾರ್ಯಕರ್ತರ ಗತಿಯೇನು’ ಎಂದು ಪ್ರಶ್ನಿಸಿದರು.
ಎಂ.ಪಿ.ವೀಣಾ ಮಹಾಂತೇಶ್, ‘ಬ್ಲಾಕ್ ಕಾಂಗ್ರೆಸ್ ಸಮಿತಿ ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತಿಲ್ಲ’ ಎಂದರು.
ಪುರಸಭೆ ಸದಸ್ಯ ಎಂ.ವಿ. ಅಂಜಿನಪ್ಪ, ತಾಲ್ಲೂಕು ಪಂಚಾಯಿತಿ ಸದಸ್ಯ ಹುಲಿಕಟ್ಟೆ ಚಂದ್ರಪ್ಪ, ಕಲ್ಲಹಳ್ಳಿ ಗೋಣೆಪ್ಪ ಸೇರಿದಂತೆ ಅನೇಕ ಸದಸ್ಯರು ವೀಕ್ಷಕರಿಗೆ ದೂರು ಸಲ್ಲಿಸಿದರು.
ಅಲ್ಲಂ ವೀರಭದ್ರಪ್ಪ, ‘ನಿಮ್ಮ ದೂರು ಆಲಿಸಿದ್ದು, ಪ್ರಾಥಮಿಕ ಮಾಹಿತಿ ಹೈಕಮಾಂಡ್ಗೆ ಸಲ್ಲಿಸುತ್ತೇನೆ’ ಎಂದರು.
ಬಳ್ಳಾರಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ಎಂ. ಶಿವಯೋಗಿ, ಮುಖಂಡರಾದ ವಿಜಯ್ಕುಮಾರ, ಬೇಲೂರು ಅಂಜಪ್ಪ, ಗೌಸ್ ಮೊಯಿನುದ್ದೀನ್, ಎಸ್.ಮಂಜುನಾಥ್, ಶಶಿಧರ ಪೂಜಾರ್, ಎಚ್.ಬಿ.ಪರಶುರಾಮಪ್ಪ, ಎಚ್.ಕೆ.ಹಾಲೇಶ್, ಪೋಮ್ಯನಾಯ್ಕ, ಪ್ರೇಮ್ಕುಮಾರ, ದಾದಾ ಖಲಂದರ್, ಜಂಬಣ್ಣ, ಪಿ.ಶಿವಕುಮಾರ ಇದ್ದರು.