ದಾವಣಗೆರೆ: ಒಂದು ವರ್ಷದ ಬಾಲಕಿ ಸೇರಿ ಜಿಲ್ಲೆಯಲ್ಲಿ 163 ಮಂದಿಗೆ ಕೊರೊನಾ ಇರುವುದು ಶನಿವಾರ ದೃಢಪಟ್ಟಿದೆ. ಮೂವರು ಮೃತಪಟ್ಟಿದ್ದಾರೆ.
ಚನ್ನಗಿರಿ ತಾಲ್ಲೂಕು ನೀತಿಗೆರೆಯ 60 ವರ್ಷದ ವೃದ್ಧೆ ಉಸಿರಾಟದ ಸಮಸ್ಯೆ ಮತ್ತು ಅಧಿಕ ರಕ್ತದೊತ್ತಡದಿಂದ ನಿಧನರಾಗಿದ್ದಾರೆ. ಕೆಟಿಜೆ ನಗರದ 65 ವರ್ಷದ ವೃದ್ಧೆ ಮತ್ತು ಹಾವೇರಿ ಜಿಲ್ಲೆ ಹಿರೇಕೆರೂರು ತಾಲ್ಲೂಕಿನ 68 ವರ್ಷದ ವೃದ್ಧ ಉಸಿರಾಟದ ಸಮಸ್ಯೆ ಮತ್ತು ಹೃದಯ ಸಂಬಂಧಿ ಕಾಯಿಲೆಯಿಂದ ಮೃತಪಟ್ಟಿದ್ದಾರೆ.
23 ವೃದ್ಧರು, 13 ವೃದ್ಧೆಯರು, ಮೂವರು ಬಾಲಕರು, ಆರು ಮಂದಿ ಬಾಲಕಿಯರು ಸೋಂಕಿಗೆ ಒಳಗಾಗಿದ್ದಾರೆ.
ಎಸ್ಎಸ್ಐಎಂಎಸ್ ಆಸ್ಪತ್ರೆಯ ಇಬ್ಬರು, ಬಾಪೂಜಿ ಆಸ್ಪತ್ರೆಯ ಇಬ್ಬರು, ದಾವಣಗೆರೆ ವಿಶ್ವವಿದ್ಯಾಲಯ, ಸಿಟಿ ಸೆಂಟ್ರಲ್ ಆಸ್ಪತ್ರೆಯ ತಲಾ ಒಬ್ಬರಿಗೆ ಕೊರೊನಾ ಬಂದಿದೆ.
ದಾವಣಗೆರೆ ತಾಲ್ಲೂಕಿನ 74 ಮಂದಿಗೆ ಸೋಂಕು ಬಂದಿದೆ. ಬೇತೂರು, ಕಾಡಜ್ಜಿ, ಬೆಳಲಗೆರೆ, ಕೆರೆಯಗಳಹಳ್ಳಿ, ಮುದೇನಹಳ್ಳಿ, ನಾಗೇನಹಳ್ಳಿ ಹೀಗೆ 10 ಮಂದಿ ಗ್ರಾಮೀಣ ಪ್ರದೇಶದವರು. ಉಳಿದ 64 ಮಂದಿ ಮಹಾನಗರ ಪಾಲಿಕೆ ವ್ಯಾಪ್ತಿಯವರು. ನಿಟುವಳ್ಳಿ, ಎಸ್ಎಸ್ ಬಡಾವಣೆ, ತರಳಬಾಳು ಬಡಾವಣೆ, ಶಿವಕುಮಾರಸ್ವಾಮಿ ಬಡಾವಣೆಗಳಲ್ಲಿ ಐದಕ್ಕಿಂತ ಅಧಿಕ ಪ್ರಕರಣಗಳು ಪತ್ತೆಯಾಗಿವೆ.
ಹರಿಹರ ತಾಲ್ಲೂಕಿನಲ್ಲಿ 27, ಜಗಳೂರು ತಾಲ್ಲೂಕಿನಲ್ಲಿ 22, ಚನ್ನಗಿರಿ ತಾಲ್ಲೂಕಿನಲ್ಲಿ 7, ಹೊನ್ನಾಳಿ–ನ್ಯಾಮತಿ ತಾಲ್ಲೂಕಿನಲ್ಲಿ 6 ಮಂದಿಗೆ ಸೋಂಕು ತಗುಲಿದೆ.
132 ಮಂದಿ ಶನಿವಾರ ಗುಣಮುಖರಾಗಿದ್ದಾರೆ. 18 ವೃದ್ಧರು, 10 ವೃದ್ಧೆಯರು, ನಾಲ್ವರು ಬಾಲಕಿಯರು ಒಳಗೊಂಡಿದ್ದಾರೆ.
ಜಿಲ್ಲೆಯಲ್ಲಿ ಈವರೆಗೆ 14,406 ಮಂದಿಗೆ ಕೊರೊನಾ ಬಂದಿದೆ. 11,331 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. 231 ಮಂದಿ ಮೃತಪಟ್ಟಿದ್ದಾರೆ. 2844 ಸಕ್ರಿಯ ಪ್ರಕರಣಗಳಿವೆ. ಏಳು ಮಂದಿ ಐಸಿಯುನಲ್ಲಿ ಚಿಕಿತ್ಸೆ
ಪಡೆಯುತ್ತಿದ್ದಾರೆ.
11 ಮಂದಿಗೆ ಕೊರೊನಾ ದೃಢ
ಮಲೇಬೆನ್ನೂರು: ಪಟ್ಟಣ ಸೇರಿ ಹೋಬಳಿ ವ್ಯಾಪ್ತಿಯ 11 ಮಂದಿ ನಾಗರಿಕರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.
ಸಮೀಪದ ಬಿಳಸನೂರಿನ ಇಬ್ಬರು ಪುರುಷರು, ಇಬ್ಬರು ಮಹಿಳೆಯರು, ನಿಟ್ಟೂರಿನ ಮೂವರು ಮಹಿಳೆಯರು, ನಂದಿತಾವರೆ ಒಬ್ಬ ಮಹಿಳೆ, ಕುಂಬಳೂರು, ಧೂಳೆಹೊಳೆ, ಹಿರೆಹಾಲಿವಾಣದ ತಲಾ ಒಬ್ಬ ಪುರುಷರಿಗೆ ಕೊರೊನಾ ತಗುಲಿದೆ. ಡಾ. ನಿಸಾರ್ ಅಹ್ಮದ್, ಹಿರಿಯ ಆರೋಗ್ಯ ನಿರೀಕ್ಷಕ ಉಮಣ್ಣ, ಸಿಬ್ಬಂದಿ ಇದ್ದರು.
ಮೂವರಿಗೆ ಸೋಂಕು
ನ್ಯಾಮತಿ: ಸಮೀಪದ ಸುರಹೊನ್ನೆ ಗ್ರಾಮದ ದೊಡ್ಡಬೀದಿಯ ಪುರುಷ, ಯುವಕ ಹಾಗೂ ಪಟ್ಟಣದ ಕಾಳಿಕಾಂಬಾ ಬೀದಿಯ ಪುರುಷ ಒಟ್ಟು ಮೂವರಿಗೆ ಕೊರೊನಾ ಸೋಂಕು ಬಂದಿದೆ.
ಸಮುದಾಯ ಆಸ್ಪತ್ರೆಯಲ್ಲಿ ಶನಿವಾರ 15 ಮಂದಿಗೆ ಕೊರೊನಾ ಪರೀಕ್ಷೆ ಮಾಡಿಸಲಾಗಿತ್ತು ಎಂದು ಸಮುದಾಯ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ರೇಣುಕಾನಂದ ಮೆಣಸಿನಕಾಯಿ ಮಾಹಿತಿ ನೀಡಿದರು.
ಸಾಸ್ವೆಹಳ್ಳಿ: ಐವರಿಗೆ ಪಾಸಿಟಿವ್
ಸಾಸ್ವೆಹಳ್ಳಿ: ಇಲ್ಲಿನ ಇಬ್ಬರು ಬಾಲಕಿಯರು, ಪುರುಷ ಹಾಗೂ ಹನುಮನಹಳ್ಳಿಯ ಬಾಲಕಿ ಹಾಗೂ ಮಹಿಳೆ ಸೇರಿ ಒಟ್ಟು ಐವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ಉಪತಹಶಿಲ್ದಾರ್ ಎಸ್.ಪರಮೇಶ್ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.