ಹೊನ್ನಾಳಿ: ಕೋವಿಡ್ ಕೇರ್ ಸೆಂಟರ್ಗೆ ಬಂದು ಸೇವೆ ನೀಡಲು ಯಾರಿಗೂ ಅಡ್ಡಿಪಡಿಸಿಲ್ಲ. ಕಳೆದ ಹನ್ನೆರಡು ದಿನಗಳಲ್ಲಿ ಸಾಕಷ್ಟು ಜನರು ಇಲ್ಲಿಗೆ ಬಂದು ಊಟ, ತಿಂಡಿ ನೀಡಿದ್ದಾರೆ. ಕಾಂಗ್ರೆಸ್ ಮುಖಂಡರು ನೆಪಕ್ಕೆ ಮಾತ್ರ ಸೆಂಟರ್ಗೆ ಭೇಟಿ ನೀಡಿ ಹೋಗಿದ್ದಾರೆ ಎಂದು ಶಾಸಕ ಎಂ.ಪಿ. ರೇಣುಕಾಚಾರ್ಯ ತಿಳಿಸಿದರು.
ತಾಲ್ಲೂಕಿನ ಅರಬಗಟ್ಟೆ ಕೋವಿಡ್ ಕೇರ್ ಸೆಂಟರ್ನಿಂದ 72 ಜನ ಗುಣಮುಖರಾಗಿ ಮನೆಗೆ ತೆರಳಿದ ಸಂದರ್ಭದಲ್ಲಿ ಅವರ ಮೇಲೆ ಹೂಗಳನ್ನು ಸುರಿಸಿ, ಶುಭ ಕೋರಿ ಮಾತನಾಡಿದರು.
‘ನನ್ನ ವಿರುದ್ಧ ಯಾರು ಏನೇ ಟೀಕೆ ಮಾಡಿದರೂ ಅದಕ್ಕೆ ತಲೆಕೆಡಿಸಿಕೊಳ್ಳುವುದಿಲ್ಲ. ಅದಕ್ಕೆಲ್ಲ ಕೋವಿಡ್ ಕೇರ್ ಸೆಂಟರ್ನಲ್ಲಿರುವ ಜನರೇ ತಕ್ಕ ಉತ್ತರ ನೀಡುತ್ತಾರೆ’ ಎಂದು ಹೇಳಿದರು.
ಅವಳಿ ತಾಲ್ಲೂಕಿನಲ್ಲಿ ದಿನಕಳೆದಂತೆ ಸೋಂಕು ಕಡಿಮೆಯಾಗುತ್ತಿದೆ. ಹಾಗಂತ ಯಾರೂ ಕೂಡ ಮೈ ಮರೆಯಬಾರದು. ಕೋವಿಡ್ ಮೂರನೇ ಅಲೆ ಅತ್ಯಂತ ಭೀಕರವಾಗಿದ್ದು, ಅದನ್ನು ಎದುರಿಸಲು ತಾಲ್ಲೂಕು ಆಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ ಎಂದು ತಿಳಿಸಿದರು.
ಬಿಳಿ ಹೋಳಿಗೆ ಊಟ: ಕೋವಿಡ್ ಕೇರ್ ಸೆಂಟರ್ನಲ್ಲಿರುವ ಕೊರೊನಾ ಸೋಂಕಿತರಿಗೆ ಹೊನ್ನಾಳಿಯ ಗಿರೀಶ್ ಮತ್ತು ಸ್ನೇಹ ಬಳಗದಿಂದ ಬಿಳಿ ಹೋಳಿಗೆ ಊಟದ ವ್ಯವಸ್ಥೆ ಮಾಡಿಸಲಾಗಿತ್ತು. ಈ ಸಂದರ್ಭದಲ್ಲಿ ಪೈಲ್ವಾನ್ ಮಂಜು, ಜಿಲ್ಲಾ ಪಂಚಾಯಿತಿ ಸದಸ್ಯ ಸುರೇಂದ್ರ ನಾಯ್ಕ, ಹಾಜರಿದ್ದರು.