ಬಿಲ್ಲಹಳ್ಳಿ (ಚನ್ನಗಿರಿ): ‘ರಾಜ್ಯ ಸರ್ಕಾರ ಬಸವಣ್ಣ ಅವರನ್ನು ‘ಸಾಂಸ್ಕೃತಿಕ ನಾಯಕ’ ಎಂದು ಘೋಷಿಸಿರುವು ಸ್ವಾಗತಾರ್ಹವಾಗಿದೆ. ಈ ನಿಟ್ಟಿನಲ್ಲಿ ಘೋಷಣೆಯನ್ನು ಆಚರಣೆಗೆ ತರುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ’ ಎಂದು ಸಾಣೇಹಳ್ಳಿ ತರಳಬಾಳು ಮಠದ ಪಂಡಿತಾರಾಧ್ಯ ಶ್ರೀ ತಿಳಿಸಿದರು.
ತಾಲ್ಲೂಕಿನ ಬಿಲ್ಲಹಳ್ಳಿ ಗ್ರಾಮದ ಶಿವಬಸವೇಶ್ವರ ಸ್ವಾಮಿ ಗದ್ದಿಗೆ ಮಠದಲ್ಲಿ ಸೋಮವಾರ ತಾಲ್ಲೂಕು ಶರಣ ಸಾಹಿತ್ಯ ಪರಿಷತ್ನಿಂದ ನಡೆದ ಲಿಂ. ಶಿವಬಸವೇಶ್ವರ ಹಾಗೂ ಚನ್ನಬಸವ ಸ್ವಾಮೀಜಿಯ 12ನೇ ವರ್ಷದ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
‘ಇಂದಿನ ದಿನಗಳಲ್ಲಿ ಎಲ್ಲರೂ ಮನೆಯಲ್ಲಿ ಸ್ನಾನ ಮಾಡಿ ನಂತರ ದೇವಾಲಯಗಳಿಗೆ ಹೋಗಿ ದೇವರ ದರ್ಶನ ಮಾಡುತ್ತಾರೆ. ನಾವು ದೇವಾಲಯಗಳಿಗೆ ಹೋಗುವ ಅವಶ್ಯಕತೆ ಇಲ್ಲ. ಏಕೆಂದರೆ ದೇಹವೇ ಒಂದು ದೇಗುಲವಾಗಿದೆ. ನಮ್ಮಲ್ಲಿರುವ ಇಷ್ಟಲಿಂಗವನ್ನು ಭಕ್ತಿಯಿಂದ ಪೂಜಿಸಿದರೆ ಸಾಕು, ದೇವರ ದರ್ಶನ ಆದಂತೆ’ ಎಂದರು.
‘ಬೂಟಾಟಿಕೆಯ ಪೂಜೆ– ಪುನಸ್ಕಾರ ಮಾಡಬಾರದು. ದೇಹ ನಿರ್ಮಲವಾದರೆ ಸಾಲದು, ನಮ್ಮ ಮನಸ್ಸು ನಿರ್ಮಲವಾಗಿರಬೇಕು. ಆಧ್ಮಾತ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರೆ ಉತ್ತಮ ವಿಚಾರಗಳನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ’ ಎಂದರು.
ಕಾಗ್ಮ ಸಂಸ್ಥೆ ಮಾಜಿ ಅಧ್ಯಕ್ಷ ಎಚ್.ಎಸ್. ಮಲ್ಲಿಕಾರ್ಜುನಪ್ಪ, ಪಂಕಜಶ್ರೀ ಪ್ರಶಸ್ತಿ ಪುರಸ್ಕೃತೆ ಸಾಹಿತಿ ಕೆ.ಜಿ. ಸರೋಜ ನಾಗರಾಜ್, ಕನ್ನಡ ಸಾಹಿತ್ಯ ಪರಿಷತ್ ನಿಕಟ ಪೂರ್ವ ಅಧ್ಯಕ್ಷ ಎಂ.ಯು. ಚನ್ನಬಸಪ್ಪ, ದತ್ತಿ ದಾನಿಗಳಾದ ಎಲ್.ಬಿ. ಕುಮಾರಪ್ಪ ಉಪಸ್ಥಿತರಿದ್ದರು.
ಶರಣ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಎಸ್. ಮಲ್ಲೇಶಪ್ಪ ಅಧ್ಯಕ್ಷತೆ ವಹಿಸಿದ್ದರು. ಪಾಂಡೋಮಟ್ಟಿ ವಿರಕ್ತ ಮಠದ ಗುರುಬಸವ ಸ್ವಾಮೀಜಿ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.