ದಾವಣಗೆರೆ: ನಗರ ದೇವತೆ ದುರ್ಗಾಂಬಿಕಾ ದೇವಿಯ ಜಾತ್ರಾ ಮಹೋತ್ಸವ ಮಾರ್ಚ್ 13ರಿಂದ 16ರ ವರೆಗೆ ನಡೆಯಲಿದೆ ಎಂದು ದೇವಸ್ಥಾನ ಆಡಳಿತ ಸಮಿತಿಯ ಗೌರವಾಧ್ಯಕ್ಷ, ಶಾಸಕ ಶಾಮನೂರು ಶಿವಶಂಕರಪ್ಪ ತಿಳಿಸಿದರು.
ದುರ್ಗಾಂಬಿಕಾ ದೇವಸ್ಥಾನದ ಸಭಾಂಗಣದಲ್ಲಿ ಗುರುವಾರ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಕೊರೊನಾ ಕಡಿಮೆಯಾಗುವ ನಿರೀಕ್ಷೆ ಇದೆ. ಅಲ್ಲದೇ ಈಗ ಕೊರೊನಾದಿಂದ ಜೀವಾಪಾಯಗಳು ಉಂಟಾಗುತ್ತಿಲ್ಲ. ಹಾಗಾಗಿ ಜಾತ್ರೆ ನಡೆಸಲಾಗುವುದು ಎಂದು ತಿಳಿಸಿದರು.
ಮಾರ್ಚ್ 13ರಂದು ಬೆಳಿಗ್ಗೆ ದೇವಿಗೆ ಪಂಚಾಮೃತ ಅಭಿಷೇಕ, ರಾತ್ರಿ ಕಂಕಣಧಾರಣೆ ಮಾಡಲಾಗುವುದು. ಅಲ್ಲದೇ ಸಾರ ಹಾಕಲಾಗುವುದು. ಮಾರ್ಚ್ 14 ಮತ್ತು 15ರಂದು ದೇವಿಗೆ ವಿಶೇಷ ಪೂಜೆ ನಡೆಯಲಿದೆ. ಮಾರ್ಚ್ 16ರಂದು ಚರಗ ಚೆಲ್ಲುವ ಕಾರ್ಯಕ್ರಮ ನಡೆಸಲಾಗುವುದು ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಧರ್ಮದರ್ಶಿ ಗೌಡ್ರ ಚನ್ನಬಸಪ್ಪ ಸೇರಿದಂತೆ ಟ್ರಸ್ಟಿಗಳು, ಸಾರ್ವಜನಿಕರು, ಪುರೋಹಿತರು ಇದ್ದರು.