ದಾವಣಗೆರೆ: ‘ಪ್ರಜಾವಾಣಿ’ ಅಮೃತ ಮಹೋತ್ಸವ ಹಾಗೂ ವಿಶ್ವ ಕ್ಯಾನ್ಸರ್ ಜಾಗೃತಿ ದಿನಾಚರಣೆ ಅಂಗವಾಗಿ ಫೆಬ್ರುವರಿ 4ರಂದು ನಗರದಲ್ಲಿ ‘ಕ್ಯಾನ್ಸರ್ ಜಾಗೃತಿ ಜಾಥಾ’ ಆಯೋಜಿಸಲಾಗಿದೆ.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಸರ್ವೇಕ್ಷಣಾ ಘಟಕ ಎನ್ಸಿಡಿ ವಿಭಾಗ, ದಾವಣಗೆರೆ ಕ್ಯಾನ್ಸರ್ ಫೌಂಡೇಶನ್, ಸಿದ್ಧಗಂಗಾ ವಿದ್ಯಾಸಂಸ್ಥೆ, ಸರ್ ಎಂ.ವಿ. ಪಿಯು ಕಾಲೇಜು, ವಿಶ್ವಾರಾಧ್ಯ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಸಂಸ್ಥೆ, ನಂಜಪ್ಪ ಆಸ್ಪತ್ರೆ, ಲೈಫ್ಲೈನ್ ವಿಬಿಡಿಒ, ಆರ್.ಜಿ. ಇನ್ಸ್ಟಿಟ್ಯೂಟ್ ಆಫ್ ಕಾಮರ್ಸ್ ಅಂಡ್ ಮ್ಯಾನೇಜ್ಮೆಂಟ್, ಭಾರತೀಯ ರೆಡ್ಕ್ರಾಸ್, ರಾಯ್ಕರ್ ಜ್ಯೂವೆಲರ್ಸ್ ಹಾಗೂ ವಿವಿಧ ಸಂಘ– ಸಂಸ್ಥೆಗಳ ಸಹಯೋಗದಲ್ಲಿ ಈ ಜಾಥಾ ನಡೆಯಲಿದ್ದು, ಅಂದು ಬೆಳಿಗ್ಗೆ 7ಕ್ಕೆ ನಗರದ ಹೈಸ್ಕೂಲ್ ಮೈದಾನದಿಂದ ಜಾಗೃತಿ ಜಾಥಾ ನಡೆಯಲಿದೆ.
ಆರೋಗ್ಯ ಇಲಾಖೆಯು ಪ್ರಸಕ್ತ ಸಾಲಿನ ಕ್ಯಾನ್ಸರ್ ಜಾಗೃತಿ ಸಪ್ತಾಹವನ್ನು ‘ನಮ್ಮ ದನಿಗಳನ್ನು ಕೂಡಿಸೋಣ ಮತ್ತು ಕ್ರಮ ಕೈಗೊಳ್ಳೋಣ’ ಎಂಬ ಘೋಷ ವಾಕ್ಯದೊಂದಿಗೆ ಆಚರಿಸಲು ನಿರ್ಧರಿಸಿದ್ದು, ಜಿಲ್ಲಾಧಿಕಾರಿ ಶಿವಾನಂದ ಕಾಪಶಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್, ಜಿಲ್ಲಾ ಪಂಚಾಯಿತಿ ಸಿಇಒ ಎ. ಚನ್ನಪ್ಪ ಅವರು ಜಾಗೃತಿ ಜಾಥಾಕ್ಕೆ ಚಾಲನೆ ನೀಡಲಿದ್ದಾರೆ. ವಿವಿಧ ಅಧಿಕಾರಿಗಳು, ದಾವಣಗೆರೆ ಮೂಲದ ಚಲನಚಿತ್ರ ನಟ–ನಟಿಯರು, ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ ಯಶಸ್ಸನ್ನು ಕಂಡವರು, ನಗರದ ಸಂಘ– ಸಂಸ್ಥೆಗಳ ಸದಸ್ಯರು ಅಂದಾಜು 4 ಕಿಲೋಮೀಟರ್ ನಡಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ನಗರದ ವಿವಿಧ ಶಾಲೆ– ಕಾಲೇಜುಗಳ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ, ಆರೋಗ್ಯ ಇಲಾಖೆಯ ಸಿಬ್ಬಂದಿ ಮತ್ತು ಆಶಾ ಕಾರ್ಯಕರ್ತೆಯರು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಂಘದ ಸದಸ್ಯೆಯರು ಮತ್ತು ಸಿಬ್ಬಂದಿ, ಸಂಘ–ಸಂಸ್ಥೆಗಳ ಸದಸ್ಯರು, ಸ್ವಯಂ ಸೇವಕರು, ವೈದ್ಯರು, ‘ಪ್ರಜಾವಾಣಿ’ ಪತ್ರಿಕಾ ಸಮೂಹದ ಸಿಬ್ಬಂದಿ, ಏಜೆಂಟರು, ಪತ್ರಿಕಾ ವಿತರಕರು ಈ ಸಂದರ್ಭ ಹಾಜರಿರಲಿದ್ದಾರೆ.
ಕ್ಯಾನ್ಸರ್ಗೆ ಕಾರಣವಾಗುವ ಅಂಶಗಳಿಂದ ದೂರವಿರುವಂತೆ ಯುವ ಜನರಲ್ಲಿ ಅರಿವು ಮೂಡಿಸುವ ಈ ವಿಶಿಷ್ಟ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಭಾಗವಹಿಸಲು ಕೋರಲಾಗಿದೆ.
ಅರಿವು ಮೂಡಿಸಲು ಕೈಜೋಡಿಸಿ: ಪೃಥ್ವಿ ಶಾಮನೂರು
‘ನಮ್ಮ ನೆಚ್ಚಿನ ‘ಪ್ರಜಾವಾಣಿ’ ಪತ್ರಿಕೆ 75 ವಸಂತಗಳನ್ನು ಪೂರೈಸಿರುವ ಸಂಭ್ರಮದಲ್ಲಿದೆ. ಪತ್ರಿಕೆಯ ಅಮೃತ ಮಹೋತ್ಸವದ ಅಂಗವಾಗಿ ವಿವಿಧ ಸಂಘ– ಸಂಸ್ಥೆಗಳ ಸಹಯೋಗದಲ್ಲಿ ಫೆ.4ರಂದು ನಡೆಯಲಿರುವ ‘ಕ್ಯಾನ್ಸರ್ ಜಾಗೃತಿ ಜಾಥಾ’ದಲ್ಲಿ ನಾನು ನನ್ನೆಲ್ಲ ಸ್ನೇಹಿತರೊಂದಿಗೆ ಭಾಗವಹಿಸುತ್ತಿದ್ದೇನೆ. ಈ ಅಪರೂಪದ ಕಾರ್ಯಕ್ಕೆ ನೀವೂ ಕೈಜೋಡಿಸಿ’
‘ಕ್ಯಾನ್ಸರ್ ಈಗ ಔಷಧ ದೊರೆಯದ ಮಹಾಮಾರಿಯಲ್ಲ. ಜನರಿಗೆ ಈ ಕುರಿತ ಅರಿವಿನ ಕೊರತೆಯಿಂದಾಗಿ ಕ್ಯಾನ್ಸರ್ ಬಗ್ಗೆ ಭಯ ಇದೆ. ಕ್ಯಾನ್ಸರ್ ಆರಂಭಿಕ ಹಂತದಲ್ಲಿಯೇ ಪತ್ತೆಯಾದರೆ ಗುಣಪಡಿಸುವುದು ಸುಲಭ. ಆರಂಭಿಕ ಹಂತ ದಾಟಿದರೂ ಚಿಕಿತ್ಸೆ ಇದೆ. ಜನರು ಅದರಲ್ಲೂ ನನ್ನಂಥ ಯುವಜನತೆ ಈ ಬಗ್ಗೆ ಮಾಹಿತಿ ಹೊಂದಿರಬೇಕು. ಕ್ಯಾನ್ಸರ್ಗೆ ಕಾರಣವಾಗುವ ಅಂಶಗಳಿಂದ ದೂರ ಉಳಿಯಬೇಕು ಎಂಬ ಉದ್ದೇಶದೊಂದಿಗೆ ನಡೆಯುತ್ತಿರುವ ಈ ‘ಕ್ಯಾನ್ಸರ್ ಜಾಗೃತಿ ಜಾಥಾ’ದಲ್ಲಿ ನಾನು ಹೆಮ್ಮೆಯಿಂದ ಪಾಲ್ಗೊಳ್ಳುತ್ತಿದ್ದೇನೆ. ನೀವೂ ನಮ್ಮೊಂದಿಗೆ ಹೆಜ್ಜೆ ಹಾಕಿ’
ಪೃಥ್ವಿ ಶಾಮನೂರು, ‘ಪದವಿ ಪೂರ್ವ’ ಚಲನಚಿತ್ರದ ನಾಯಕ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.